ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಆ ಘಟನೆ ನಡೆದು ಇಂದಿಗೆ ಹತ್ತು ವರ್ಷ !





ಅಂದು ಅವಳ ನಿಶ್ಚಿತಾರ್ಥ. ಮನೆ ತುಂಬಾ ನಗು ಸಡಗರ. ಅವಳ ಗೆಳತಿಯರೋ ಅವಳನ್ನು ಛೇಡಿಸಿದ್ದೇ ಛೇಡಿಸಿದ್ದು. ಅವಳ ಗೆಳತಿಯರು ಹಾಗೂ ತಂಗಿಯರದೇ ಕಲರವ ನಿಶ್ಚಿತಾರ್ಥದ ಮನೆ ತುಂಬಾ.
ಹಾಸ್ಯ ನಗು ಹರಟೆಯ ನಡುವೆ ಇಣುಕುತಿದ್ದ ಸಣ್ಣ ಬೇಸರ ಏನಪ್ಪಾ ಅಂದ್ರೆ ಇನ್ನು ಮುಂದೆ ಗೆಳತಿಯರೆಲ್ಲಾ ಬೇರೆ ಬೇರೆಯಾಗಿಬಿಡ್ತಾರಲ್ಲ ಅಂತ. ಅದಾಗಲೇ ಅವಳ ಇನ್ನೊಬ್ಬಳು ಗೆಳತಿಗೂ ಮದುವೆ ನಿಶ್ಚಯ ಆಗಿದ್ದು, ಇನ್ನು ಎಲ್ಲರೂ ಹೀಗೆ ಒಟ್ಟಿಗೆ ಸೇರುವುದು ಯಾವಾಗಲೋ ಎಂಬ ಬೇಸರ. ಅಂತೂ ನಿಶ್ಚಿತಾರ್ಥ ಕುಶಿ ಕುಶಿಯಿಂದ ಮುಗಿಯುವಷ್ಟರಲ್ಲಿ ಒಂದು ಪ್ಲಾನ್ ರೆಡೀ ಮಾಡಿಯೆಬಿಟ್ಟರು. 
ಮರುದಿನವೇ ಲಕ್ಕಿಕುಣಿ ಫಾಲ್ಸ್ ಗೆ ನಿಶ್ಚಿತಾರ್ಥಕ್ಕೆ ಬಂದಿದ್ದ ನೆಂಟ ರಾಮಣ್ಣನ ಜೀಪ್ ನಲ್ಲಿಯೇ ಹೋಗುವುದೆಂದು ಪ್ಲಾನಿಸಿ ಆಗಲೇ ಅರೇಂಜ್ ಮೆಂಟ್ ಶುರುಮಾಡಿಬಿಟ್ಟಿದ್ದರು. ಮರುದಿನ ಟ್ರಿಪ್ ನಲ್ಲಿ ನಗೆ ಬಾಂಬ್ ಗಳದೇ ಸಿಡಿತ.
"ಇನ್ನೊಂದು ತಿಂಗಳು ನನ್ನದು ಉಪವಾಸ, ಇವಳ ಮದುವೆಯಲ್ಲಿಯೇ ತಿಂಗಳಪೂರ್ತಿಯ ಊಟ" ಅಂತ ಮಂಜು ಹೇಳಿದರೆ ಇವಳು ಸುಮ್ಮನಿದ್ದಾಳೆಯೇ.
"ಹಾಗೆ ಮಾಡು ಬೇಡ ಅನ್ನಲ್ಲ. ಆದ್ರೆ ಉಡುಗೊರೆ ತಕ್ಕಂತೆ ಊಟ ಅಂತ ಮದುವೆ ಕರೆಯೋಲೆಯಲ್ಲಿಯೇ ಬರೆಸಿಬಿಡ್ತೀನಿ, ಹಾಗಾಗಿ ಒಳ್ಳೆ ಉಡುಗೊರೆ ರೆಡೀ ಇಟ್ಕೋ" ಅಂತ ಇವಳು...ನಗುವೋ ನಗು.
ಅಂತೂ ಹರಟೆ ಹಾಸ್ಯದ ಹೊಳೆ ಹರಿದು ಜಲಪಾತ ರಂಗೇರಿತ್ತು. ಸೂರ್ಯ ಪಡುವಣದತ್ತ ಸರಿಯುತ್ತಿದ್ದಂತೆ ಎಲ್ಲಾ ವಾಪಸ್ ಹೊರಟರೆ ಎಲ್ಲರಿಗೂ ಸುಸ್ತೋ ಸುಸ್ತು. ಕಲ್ಲು ಬಂಡೆಗಳಿಂದ ತುಂಬಿ ಹೋಗಿದ್ದ ಆ ದುರ್ಗಮ ದಾರಿ ಸವೆಸುವುದು ಬರುವಾಗಿನಷ್ಟು ಸುಲಭವೆನಿಸಲಿಲ್ಲ.!
ಇನ್ನೇನು ಜೀಪ್ ನಿಲ್ಲಿಸಿದ್ದ ಜಾಗಕ್ಕೆ ತಲುಪಿಬಿಟ್ಟೆವು ಅನ್ನುವಷ್ಟರಲ್ಲಿ ನಿಶ್ಚಿತಾರ್ಥದ ಹುಡುಗಿ ಒಂದು ಕಲ್ಲಿಗೆ ಕಾಲೇಡವಿಕೊಂಡು ಬಿದ್ದು ಬಿಟ್ಟಳು. ಮುಂದಿದ್ದ ಬಂಡೆಗಲ್ಲಿಗೆ ಮುಖ ಬಡಿದು ಒಮ್ಮೆ ನಕ್ಷತ್ರ ಲೋಕಕ್ಕೆ ಹೋದಂತಾಗಿ ಅಲ್ಲೇ ಕುಸಿದಳು. ಎಲ್ಲರೂ ಗಾಭರಿ. ಒಂದೇ ಕ್ಷಣದಲ್ಲಿ ಹುಡುಗಿಯ ಮುಖ ಆಂಜನೇಯ ಸ್ವಾಮಿಯ ಮುಖದಂತೆ ಊದಿಕೊಂಡಿತ್ತು. ತುಟಿಗೆ ಪೆಟ್ಟಾಗಿದ್ದರಿಂದ ಸಂಪೂರ್ಣವಾಗಿ ಊದಿಕೊಂಡು ಮೂಗಿನವರೆಗೆ ಬಂದಿತ್ತು. ಹಣೆಯಿಂದಲೂ ರಕ್ತ ಸುರಿಯುತ್ತಿತ್ತು. ಅವಳ ತಂಗಿಯರು ಗೆಳತಿಯರೆಲ್ಲ ಗಾಭರಿಗೊಂಡು ಅಳತೊಡಗಿದರೂ ಅವಳು ಧೈರ್ಯವಾಗೆ ಇದ್ದಳು. ರಾಘಣ್ಣ ತನ್ನ ಹೆಗಲಿಗಿದ್ದ ಟವೇಲನ್ನು ಅವಳ ಹಣೆಗೆ ಸುತ್ತಿ ಹೀರೋಯಿಕ್ ಆಕ್ಟ್ ಮೆರೆದಿದ್ದ. ಅಂತೂ ಎಲ್ಲರೂ ಜೀಪ್ ಹತ್ತಿ ಯಾವ ಹಾಸ್ಪಿಟಲ್ ಗೆ ಹೋಗಬೇಕೆಂದು ಚರ್ಚಿಸುತ್ತಾ ಮನೆಗೆ ಫೋನ್ ಮಾಡಿ ಅವಳ ಅಪ್ಪ ಅಮ್ಮನಿಗೆ ವಿಷಯ ತಿಳಿಸಬೇಕೆಂದು ಮಾತನಾಡಿಕೊಳ್ಳುತ್ತಿರುವಾಗ ದುಃಖ ಒತ್ತರಿಸಿ ಬಂದಿತ್ತು ಅವಳಿಗೆ.
"ಮದುವೆ ನಿಶ್ಚಿತಾರ್ಥ ದ ಸಂತೋಷದ ಗುಂಗಿನಲ್ಲಿಯೇ ಇರುವ ಅಪ್ಪ ಅಮ್ಮಂಗೇ ಈ ಮುಖ ಹೇಗೆ ತೋರಿಸಲಿ. ಅವರ ಆ ಸಂತೋಷವನ್ನು ಕಸಿದು ಈ ನೋವನ್ನ ಕೊಡ್ತಿದೀನಲ್ಲ" ಎಂದುಕೊಳ್ಳುತ್ತಾ ಮುಖ ಮುಚ್ಚಿಕೊಂಡು ಅತ್ತಳು. ಹಾಸ್ಪಿಟಲ್ ಗೆ ಹೋಗಿ ಡಾಕ್ಟರ್ ಬಾಯಿಂದ "ಏನೂ ತೊಂದರೆಯಿಲ್ಲ. ಸ್ಕಿನ್ ಕಟ್ ಆಗಿದ್ದಷ್ಟೆ. ಮುಖವಾದ್ದರಿಂದ ಸ್ವಲ್ಪ ಜಾಸ್ತಿ ಊದಿಕೊಂಡಿದೆ" ಎಂದು ಕೇಳಿದಾಗಲೆ ಎಲ್ಲರೂ ಸ್ವಲ್ಪ ನಿರಾಳವಾಗಿದ್ದು. ತುಟಿಗೆ ಎರಡು ಹೊಲಿಗೆ ಹಣೆಗೆ ಮೂರು ಹೊಲಿಗೆ ಹಾಕಿಸಿಕೊಂಡು ಮನೆ ಕಡೆ ಹೊರಟರೂ ಅಮ್ಮನಿಗೆ ಮುಖ ಹೇಗೆ ತೋರಿಸಲಿ ಅಂತಲೇ ಅವಳ ಅಳು. ಮನೆ ತಲುಪುತ್ತಿದ್ದಂತೆ ಆಗಲೇ ಫೋನ್ ನಿಂದ ವಿಷಯ ತಿಳಿದ ಅಮ್ಮ ಅಪ್ಪ ಮನೆ ಹೊರಗೆಯೇ ನಿಂತು ಕಾಯುತ್ತಿದ್ದರು. ಅವಳಿಗೆ ಅದಾಗಲೇ ವೀಪರೀತ ಊದಿಕೊಂಡ ತುಟಿಯಿಂದಾಗಿ ಮುಖ ಆಕಾರ ಕಳೆದುಕೊಂಡಿತ್ತು. ಅಲ್ಲಿಯವರೆಗೂ ತನ್ನ ದುಪಟ್ಟಾದಿಂದ ಮುಖ ಮುಚ್ಚಿಕೊಂಡಿದ್ದ ಅವಳು ಅಪ್ಪ ಅಮ್ಮನೆದುರೂ ದುಪಟ್ಟಾವನ್ನು ಮುಖದಿಂದ ತೆಗೆಯದೇ ಅಳುತ್ತಾ ಹಾಗೆ ಅಮ್ಮನ ಹೆಗಲಿಗೊರಗಿದರೆ ಅಮ್ಮನದು ಎಂದಿನಂತೆ ಧೈರ್ಯ ತುಂಬುವ ನುಡಿಗಳು. "ಎಂತದೂ ಆಗ್ತಿಲ್ಲೇ, ದೇವರಿದ್ದ, ಕಾಪಾಡ್ತಾ. ಅಳದೆಂತಕ್ಕೆ. ಸುಮ್ಮನಿರು". ಅಂತ ಹೇಳ್ತಾ ಅಮ್ಮ ಸೀದಾ ದೇವರ ಕೋಣೆಗೆ ಕರೆದೊಯ್ದು ದೇವರಿಗೆ ನಮಸ್ಕಾರ ಮಾಡಿಸಿ ರೂಮ್ ಗೆ ಕರೆದುಕೊಂಡು ಹೋಗಿ ಮಲಗಿಸಿದ್ದರು. ಅಮ್ಮ ಒಳಗೆ ಎಷ್ಟು ದುಃಖಿಸುತ್ತಿರಬಹುದೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಮಕ್ಕಳಿಗೆನಾದರೂ ಆದರೆ ಅಥವಾ ಊಟ ಮಾಡದೆ ಮಲಗಿದರೆ ಅಮ್ಮ ಪಡುವ ಸಂಕಟ ಅವಳಿಗೆ ಚೆನ್ನಾಗಿ ಗೊತ್ತು. ಈಗಂತೂ ಹೊರತೋರಗೊಡದೆ ಎಲ್ಲರಿಗೂ ಧೈರ್ಯ ಹೇಳಿದರೂ ಒಳಗೊಳಗೆ ಅದೆಷ್ಟು ನೋವು ಪಡುತ್ತಾಳೆಂದೂ ಗೊತ್ತು.
ಅದರ ಜೊತೆ ಈಗ ಅಪ್ಪ ಅಮ್ಮ ಊರವರ ನೆಂಟರಿಷ್ಟರ ಪ್ರಶ್ನೆ ಎದುರಿಸುವ ಬಗ್ಗೆಯೂ ನೋವು. ಅಂದಿಗೆ ಅವಳ ಮದುವೆಗೆ ಸರಿಯಾಗಿ 34 ದಿನಗಳಿದ್ದವು. ಅವಳ ಗಾಯಗೊಂಡ ಮುಖ ನೋಡಲು ಬಂದವರಿಗ್ಯಾರಿಗೂ ಅವಳು ಮುಖ ತೋರಿಸದೆ ಹೋದರೂ ಹಲವರು ಮದುವೆ ನಡೆಯುವುದೇ ಅನುಮಾನ ಅನ್ನುವಷ್ಟರ ಮಟ್ಟಿಗೆ ಮಾತನಾಡಿ ಹೋದಾಗ ಮುಂಚಿನ ದಿನವಷ್ಟೇ ನಿಶ್ಚಿತಾರ್ಥದ ನಗೆ ತುಂಬಿದ ಮನೆಯಲ್ಲಿ ಮೌನದ ನೆರಳು ಕಾಡಿತ್ತು.
ಮಾರನೆಯ ದಿನ ಮೈಸೂರ್ ಗೆ ವಾಪಸ್ಸಾದ ಹುಡುಗ ಫೋನ್ ಮಾಡಿದಾಗ ಫೋನ್ ರಿಸಿವ್ ಮಾಡಿದ ತಂಗಿ  ಅಕ್ಕನಿಗೆ ಜ್ವರ ಎಂದು ಹೇಳಿ ಫೋನ್ ಇಟ್ಟಿದ್ದಳು.
ಅದರ ನೆಕ್ಸ್ಟ್ ಡೇ ಮದುವೆ ಹುಡುಗ ಮತ್ತೆ ಫೋನ್ ಮಾಡಿದಾಗ ಅವಳ ಅಪ್ಪ ವಿಷಯ ತಿಳಿಸಿದ್ದರು. ಗಾಭರಿಯಾದ ಹುಡುಗ ತನ್ನ ತಮ್ಮನನ್ನು ಕಳಿಸುತ್ತೇನೆಂದಾಗ "ದಯವಿಟ್ಟು ಈ ವಾರ ಬೇಡ, ಮುಂದಿನ ವಾರ ಬರ ಹೇಳಿ" ಎಂದು ಹೇಳಿ ಮುಂದಿನವಾರ ಬಂದ ಹುಡುಗನ ತಮ್ಮನೊಡನೆ ಮಾತುಕತೆ ನಡೆಸಿದಾಗಲೆ ಅಪ್ಪ ಅಮ್ಮನ ಮನಸ್ಸಿಗೆ ಸ್ವಲ್ಪ ನಿರಾಳ.

ಅವಳಿಗೋ ಜೀವನದ ಅನಿಶ್ಚಿತತೆಯ ಬಗ್ಗೆ ಸಾವಿರ ಯೋಚನೆಗಳು. ಸುಖ ದುಃಖ ಬದುಕಿನ ಎರಡು ಮುಖ ಎಂಬುದರ ಬಗ್ಗೆ ತುಂಬಾ ಯೋಚಿಸುವಂತೆ ಮಾಡಿತ್ತು ಆ ಘಟನೆ.
ಅಂತೂ ಅಪ್ಪ ಅಮ್ಮ ಹಿರಿಯರು ಹಾಗೂ ದೇವರ ಆಶೀರ್ವಾದದಿಂದ ಮತ್ತೆನೂ ತೊಂದರೆಯಾಗದೆ ನಿರ್ವಿಘ್ನವಾಗಿ ಮದುವೆ ನೆರವೇರಿತ್ತು.
ಈಗ ಅವಳ 6 ವರ್ಷದ ಮಗ ಸೃಜನ್ ಮುಖದ ಮೇಲಿನ ಕಲೆಯ ಬಗ್ಗೆ ಕೇಳಿದಾಗೆಲ್ಲಾ ಮತ್ತೊಮ್ಮೆ ಆ ಕ್ಷಣಗಳಿಗೆ ಹೋಗಿ ಬರುತ್ತಾಳೆ ಅವಳು. ಹೀಗೆ ಕಥೆಯಾಗಿಸಿ ಮಗನಿಗೆ ಹೇಳುತ್ತಾಳೆ.
ಇಂದಿಗೆ ಈ ಘಟನೆ ನಡೆದು 10 ವರ್ಷಗಳು.
ದೂರದ ಲಂಡನ್ ನಲ್ಲಿ ಕುಳಿತು ಹಳೆಯ ಫೋಟೋಗಳನ್ನೆಲ್ಲಾ ನೋಡುತ್ತಾ
.........  ಆ ಘಟನೆ ಮುಖದ ಮೇಲೆ ಉಳಿಸಿ ಹೋದ  ಕಲೆ ಕಲಾಕೃತಿಗಳ  ನೋಡಿದೊಡನೆ
................. ಹೀಗೆಯೇ ಮತ್ತೊಮ್ಮೆ ಕಾಡುವ ಆ ಸುಖ ದುಃಖಗಳ ನೆನಪುಗಳಲ್ಲಿ ಇಳಿಯುತ್ತಾಳೆ.
......................................ದೇವರೆಂಬ ಶಕ್ತಿ  ಸೃಷ್ಟಿಸಿರುವ ವಿಧಿಲೀಲೆಗಳ ಬಗ್ಗೆ ಚಿಂತನೆಗೆ ಬೀಳುತ್ತಾಳೆ.

ಯಂಡಮೂರಿ! ನಿಮ್ಮ ಬರಹಗಳು ನನ್ನೊಳಗಿವೆ..

ನಾನು ಚಿಕ್ಕವಳಿದ್ದಾಗ ಕಥೆ ಕಾದಂಬರಿ ಓದಲು ಶುರು ಮಾಡುವ ಸಮಯಕ್ಕೆ ನನ್ನ ಕೈಗೆ ಸಿಕ್ಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಗಳು. ನನ್ನ ತಂದೆಗೆ ಯಂಡಮೂರಿಯವರ ಬರಹಗಳು ಇಷ್ಟವಾಗಿದ್ದ ಕಾರಣ ಮನೆಯಲ್ಲಿ ಯಂಡಮೂರಿಯವರ ಸಾಕಷ್ಟು ಪುಸ್ತಕಗಳಿದ್ದವು. ಅವರ ಬರಹಗಳನ್ನು ಓದುತ್ತಾ ಓದುತ್ತಾ ಅದೆಷ್ಟು ಅವರ ಅಭಿಮಾನಿಯಾದೇನೆಂದರೆ ಸ್ವಲ್ಪ ಸೂಕ್ಷ್ಮ ಮನಸ್ಸಿನವಳಾಗಿದ್ದ ನಾನು,  ನನಗೆ ಮನಸ್ಸಿಗೆ ಕಷ್ಟವೆನಿಸಿದಾಗೆಲ್ಲಾ ಓಡಿ ಹೋಗಿ ಹಿಡಿದುಕೊಳ್ಳುತ್ತಿದ್ದುದು ಯಂಡಮೂರಿಯವರ ಕೆಲವು ಆಯ್ದ ಪುಸ್ತಕಗಳನ್ನಾಗಿತ್ತು. ಅವನ್ನು ಓದಿದೊಡನೆಯೇ ಮನಸ್ಸಿಗೆ ಎಷ್ಟು ಸಮಾಧಾನ ಸಿಗುತ್ತಿತ್ತೆಂದರೆ .....
ಮನಸಿಗೆ ತುಂಬಾ ನೋವಾದಾಗ ಇದು ಸಹಜ ಮನಸ್ಸಿಗೆ ನೋವು ನಲಿವು ಎರಡೂ ಇರಬೇಕು ಎಂದು ಮನಸ್ಸನ್ನು ಘನವಾಗಿಸಿದವರು ಯಂಡಮೂರಿ, ಸಂಬಂಧಗಳೇ ಇಷ್ಟು ಅನಿಸಿದಾಗ ನನ್ನಂತೆ ಸುತ್ತಲಿರುವವರೆಲ್ಲರೂ ಮನುಷ್ಯರೇ ಎಂದು ಜ್ನಾಪಿಸಿಕೊಟ್ಟಿದ್ದು ಅವರು, ನಾನೇನೂ ಮಾಡಲಾರೆ ನನ್ನಿಂದೇನೂ ಸಾಧ್ಯವಿಲ್ಲ ಎಂದು ಕುಸಿದಾಗ ಆತ್ಮವಿಶ್ವಾಸ ತುಂಬುತ್ತಿದ್ದುದು ಅವರು, ಸುತ್ತಲಿರುವವರ ಮೇಲೆ ಸಿಟ್ಟುಬಂದಾಗ ನಿನ್ನಲ್ಲೂ ಕೂಡ ತಪ್ಪಿರಬಹುದು ಕುಳಿತು ಯೋಚಿಸು ಎಂದು ಸ್ವವಿಮರ್ಶೆಗೆ ದೂಡಿದ್ದು ಅವರು, ಕೊಂಕು ಮಾತುಗಳಿಗೆ ಮನಸ್ಸು ಮುದುಡಿದಾಗ ಇದೂ ಕೂಡ ಜಗದ, ಜೀವನದ ಒಂದು ಭಾಗ ಎಂಬ ವೈರಾಗ್ಯ ರಸವನ್ನು ಕುಡಿಸಿದ್ದು ಅವರು, ಭಾನಲ್ಲಿ ಹಾರುವ ಆಸೆ ಆದಾಗ ಮನಸಿಗೆ ರೆಕ್ಕೆ ಕಟ್ಟಿಕೊಟ್ಟವರೂ ಅವರೇ, ಮೊದಲ ಪ್ರೇಮದ ಅಮಲಿಂತೆ ಅವರ ಬರಹಗಳು,

ಧನ್ಯವಾದ ಎಂಬುದು ಬಲು ಚಿಕ್ಕ ಪದ..!!

ಹೀಗೊಂದು ಅರ್ಧ ಬರೆದಿಟ್ಟ ವಂದನಾರ್ಪಣೆ..:)

ಒಂಥರಾ ಇದೊಂಥರಾ

IMG_5544


ಇದ್ದರೋಂತರ ಇಲ್ಲದಿರೆ ಇನ್ನೊಂತರ

ಇದ್ದರೂ ಇಲ್ಲದಿರುವಂತಿರುವುದಿನ್ನೋಂತರ

ಇಲ್ಲದೆಯೂ ಇರುವಂತೆ ತೋರಿಕೆಯೊಂತರ

ಇದ್ದರೂ ಇಲ್ಲದಿರುವುದರ ಚಿಂತೆಯೋಂತರ

ಇಲ್ಲದಿರೆ ಇರುವ ನಿರಾಳತೆಯೊಂತರ

ಇರುವುದರೆಡೆ ಅತೃಪ್ತಿಯೊಂತರ

ಇಲ್ಲದಿರುವುದರೆಡೆ ಆಸಕ್ತಿಯೊಂತರ

ಇರುವುದರೆಡೆ ಸಂತೃಪ್ತಿಯೊಂತರ

ತರ ತರದ ಬದುಕು ಇದು

ಇಂದೋಂತರ ನಾಳೆಯಿನ್ನೋಂತರ

ಇರುವುದು ಇಲ್ಲದಿರುವುದರ ನಡುವೆ

ಜೋಕಾಲಿಯ ತರ.

ಇಲ್ಲದಿರುವುದರ ಕಡೆ

ಜೀಕುತಲೇ ಇರುವ ಮನ

ಒಮ್ಮೆ ಈ ತರ ಇನ್ನೊಮ್ಮೆ ಆ ತರ


ಆಸೆ ನಿರಾಸೆಗಳು ನಿತ್ಯ ನಿರಂತರ

ಲಹರಿ

IMG_5149
ಹಲವು ಭಾವಗಳು
ಮನದ ಹಲುಬುವಿಕೆ
ಮೊಗ್ಗಿನಲೆ ಮುದುಡಿಹೋದವೆಷ್ಟೋ
ಹೂವಾಗರಳಿ ಉದುರಿದವೆಷ್ಟೋ,
ಮೊಗ್ಗು ಹೂವುಗಳಾಗಿ ಫಲ
ನೀಡಿದ ಲಹರಿಗಳೆಷ್ಟೋ,
ಎಲ್ಲವೂ ಫಲಿಸಲೇಬೇಕೆಂಬ
ನಿಯಮವೇನೂ ಇಲ್ಲ,
ಹಲಕೆಲವು ಲಹರಿಗಳು
ಆರೆಗತ್ತಲಲಿ ಕ್ಷಣ ಮಾತ್ರ
ಮಿನುಗಿ ಹೋದ ಸಣ್ಣ ಮಿಂಚಂತೇ,
ಮರುಕ್ಷಣವೇ ಅನುಮಾನ
ಮಿಂಚು ಮಿನುಗಿದ್ದು ನಿಜವಾ ಭ್ರಮೆಯಾ!!,
ಆಕಾರಲ್ಲದೆಯೇ ಮೂಡಿದ ನೆರಳಂತೆ
ಅಸ್ಪಷ್ಟವೇ ಇರಲಿ ಬೇಸರವಿಲ್ಲ
ಬಿಸಿಲು ಬೆಳಕಿನ ಹಗಲಿಗಿಂತ
ಕೆಲವೊಮ್ಮೆ....
ಮಂಜು ಮುಸುಕಿದ
ಮಬ್ಬು ಕವಿದ ಮುಂಜಾವೇ ಇಷ್ಟ.

ಕಪ್ಪು ಬಿಳುಪಷ್ಟೆ ಅಲ್ಲ
ಎಲ್ಲ ಬಣ್ಣಗಳ ಹಲವು ಸುರುಳಿಗಳು
ಹೀಗೆಯೇ ದಡ ಸೇರದ
ಆಗೀಗ ಸುಳಿದು ಹೋಗುವ
ಸಾವಿರ ಪುಟ್ಟ ಪುಟ್ಟ ಅಲೆಗಳ ಪೂರ
ಮನವೆಂಬ ಮಹಾಸಾಗರ.

ನೆನಪುಗಳೇ ಹೀಗೆ

7061475
(ಚಿತ್ರ ಕೃಪೆ : 123RF.com)

ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ

ನೆನಪುಗಳೆ ಹಾಗೆ ಕೆಲವೊಮ್ಮೆ ಜಡಿಮಳೆಯಂತೆ
ಬೇಡವೆಂದರೂ ಬಿಡದೆ ಸುರಿದು
ತಿಳಿಯಾದ ಕೊಳವನು ಕಲಕಿ
ಕೊಳೆಯ ರಾಡಿಯೆಬ್ಬಿಸಿಬಿಡುತ್ತವೆ.

ನೆನಪುಗಳೆ ಹಾಗೆ ಕೆಲವೊಮ್ಮೆ ಮುಂಗಾರು ಮಳೆಯಂತೆ
ಪರಿಮಾಣದಲಿ ಸುರಿದು
ಪ್ರತಿಹೆಜ್ಜೆಯನೆಚ್ಚರಿಸಿ ಪಕ್ವತೆಯೆಡೆ ನಡೆಸಿ
ನವತೆನೆಗಳ ಬೆಳೆಸಿ  ಹಸನಾಗಿಸುತ್ತವೆ.

ನೆನಪುಗಳೆ ಹಾಗೆ ಅನಿಯಮಿತ ಮಳೆಯಂತೆ
ಶುಭ್ರಗೊಳಿಸಿದಂತೆಯೇ
ಕಲಕಿಯೂ ಬಿಡುತ್ತವೆ ಒಮ್ಮೊಮ್ಮೆ
ಮಳೆಸುರಿದ ನಂತರದ ಹೊಂಗಿರಣದ ಅನುಭವ ನೀಡಿ
ಹೊಸಕನಸುಗಳಿಗೆ ನಾಂದಿಯಾಗುತ್ತವೆ ಕೆಲವೊಮ್ಮೆ.


(ಕೆಂಡಸಂಪಿಗೆಯಲ್ಲಿ ಪ್ರಕಟಿತ. http://kendasampige.com/article.php?id=4939)

ಸಂಸಾರ ಸಮರ – ಮಡದಿಯ ಮುನಿಸು

ಛಾಯಾಚಿತ್ರ ಕೃಪೆ : ಅಂತರ್ಜಾಲ.

ಮುನಿಸು ತರವೇ ಮನದನ್ನೆ ಅಂದದಾ ಮೊಗದಲ್ಲಿ
ಕಿಡಿ ಕಾರುತಿವೆ ನಯನಗಳು ಸಿಡಿವ ಸೂರ್ಯನಂತೆ
ನಗು ಸೂಸುವಾ ಮೊಗವಿಂದು ಉಗ್ರವಾಗಿದೆಯಲ್ಲ
ಕೋಪಶಮನಗೊಳಿಸುವ ದಾರಿಯನು ಹೇಳೇ ಕಾಂತೆ .


ನನ್ನ ಬೈದು, ನೀ ನಕ್ಕು ಹಗುರವಾಗಬಹುದಾದರೆ,
ಬೈಗುಳವೂ  ಕೂಡ ಹಿತವೆನಗೆ, ನಗುತಿರು ಸುಮತಿ 
ನನ್ನ ಹಂಗಿಸಿ ನೀನು ತೃಪ್ತಿ ಪಡುವುದಾದಲ್ಲಿ
ಆ ತೃಪ್ತಿಯೂ ಸದಾ ನಿನಗಿರಲಿ ಗೆಳತಿ.

ನಿನ್ನ ಮನದಲೇ ನೆಲೆಸಿ ಆಳ ಅಳೆದಿಹೇನು ನಾನು .....
ಕಲ್ಮಷವೊಂದಿಷ್ಟಿಲ್ಲ ತಿಳಿದಿಹುದು ಎನಗೆ..
ನೀ ಹೇಳಿದಾ ಮಾತ ಕೆಳದೇ ಇದ್ದಾಗ
ಕೆಂಪೆರುವ ಮುಖದ ಕೋಪವನು ಕಂಡಿಲ್ಲವೇನು

ವಿರಸವಿಲ್ಲದಿರೆ ಸೊಗಸಿಲ್ಲ ಸುಂದರಿ
ಉಪ್ಪಿಲ್ಲದಾ ಸಾರು ಸಪ್ಪೆ ಸಪ್ಪೆ....
ಸರಸದಾ ನಡುವೆ ವಿರಸವೊಂದಿಷ್ಟಿರೆ
ಊಟದ ಜೊತೆಗಿರುವ ಉಪ್ಪಿನಕಾಯಿಯಷ್ಟೆ.

ಸಿಟ್ಟು ತಣಿಯುವ ಮೊದಲೇ
ಬಳಿ ಬರುವೆ ಅಳು ಮುಖದಿ
ಸಂತೈಸಬೇಕು ನಾನೇ ನಿನಗೆ.
ಬಯ್ದವಳು ನೀನೆ ಅಳುವವಳು ನೀನೆ.
ಮಗುವಾಗಿ ಬಿಡುವೆ ನೀನಾಗ ನನ್ನೊಡನೆ…

ನಿನ್ನ ನೆನಪು

  
ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ
ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ
ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ
ತಟ್ಟನೆ  ಸುಳಿಯುವುದು  ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ
ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ
ರಾತ್ರಿ ರಾಣಿಯು ಅರಳಿ  ಘಮ ಘಮಿಸಿ ಮತ್ತೇರಿಸಿದಾಗ
ಚಿತ್ತವನು ಸೆಳೆಯುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ  ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
ನೆರಳಿನಂತಹ ಜೊತೆಗಾತಿ ನಿನ್ನ ನೆನಪು
ಹಿತವಾಗಿ ಕಾಡುತಿದೆ   ನಿನ್ನ ನೆನಪು
ಮೈಮರೆಸಿ ನಗಿಸುತಿದೆ ನಿನ್ನ ನೆನಪು

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com