ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಸೆಳೆತ

( ಯಂಡಮೂರಿ ವೀರೇಂದ್ರನಾಥ್ ಅವರ ಒಂದು ಕಾದಂಬರಿಯಲ್ಲಿ ಬರುವ  ಸನ್ನಿವೇಷವನ್ನು ನನ್ನದೇ ರೀತಿಯಲ್ಲಿ ಕಥೆಯಾಗಿ ನಿರೂಪಿಸುವ ಒಂದು ಪ್ರಯತ್ನ.)

ಟ್ರೈನ್ ನ ಕಿಟಕಿಗೆ ತಲೆ ಆನಿಸಿ ನಿಶ್ಚಲವಾಗಿ ಕುಳಿತಿದ್ದ ನಿಖಿತಳ ದ್ರಷ್ಟಿ ವೇಗವಾಗಿ ಹಿಂದೋಡುತ್ತಿರುವ ಆ ಮರಗಳ ಮೇಲೆ ಇತ್ತು. ಅದು ಭಾವರಹಿತವಾದ  ನಿಶ್ಚಿಂತೆಯಿಂದ ಕೂಡಿದ ದೃಷ್ಟಿ . ಮನಸ್ಸಿನಲ್ಲಿ ನೀರವತೆ. ಒಂದು ದೊಡ್ಡ ಪ್ರವಾಹ ಬಂದು...ಆ ಪ್ರವಾಹ ಇಳಿದು ಹೋದ ಮೇಲೆ ಇರುವಂತಹ ಸ್ತಬ್ಧತೆ . ಅಮ್ಮ ಎಂಬ ಕೂಗಿಗೆ ಇಹಲೋಕಕ್ಕೆ ಬಂದಂತಾಗಿ ಪಕ್ಕ ತಿರುಗಿ ನೋಡಿದಳು. ನಿಖಿತ ಳ 2 ವರ್ಷದ ಮಗಳು ನಿದ್ದೆಗಣ್ಣಿನಲ್ಲೇ ಅಮ್ಮನನ್ನು ಕರೆಯುತ್ತಿದ್ದಳು. ಅವಳ ತಲೆ ಸವರಿ ಮತ್ತೆ ಮಲಗಿಸಿ, ಹಾಗೇ ಹೊರಗೆ ನೋಡುತ್ತಾ ಕುಳಿತಳು.  ಬೇಡವೆಂದು ಓಡಿಸಿದ್ದ ಆ ಯೋಚನೆಗಳು ಮತ್ತೆ ಮನದೊಳಗೆ ಸುಳಿಯಲಾರಂಬಿಸಿದವು.         ' ಎಷ್ಟು ಸುಂದರ ಸಂಸಾರ ತನ್ನದು. ಮುತ್ತಿನಂತ ಇಬ್ಬರು ಮಕ್ಕಳು. ಒಳ್ಳೆ ಉದ್ಯೋಗದಲ್ಲಿದ್ದು ಚೆನ್ನಾಗಿ ಸಂಪಾದನೆ ಮಾಡುತ್ತಿರುವ ಗಂಡ, ಸ್ವಲ್ಪ ಜಾಸ್ತಿ practical ಆದರೂ ಕೂಡ...ಅವಶ್ಯಕತೆಗನುಗುಣವಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ದಾಂಪತ್ಯ ಜೀವನ ಚೆನ್ನಾಗೆ ಇತ್ತಲ್ಲ.. ಅದ್ಯಾಕೆ ಹೀಗಾಯ್ತು ತನಗೆ....? ಎಂದೂ ತನ್ನ ಮನಸ್ಸನ್ನ ಬೇಕಾಬಿಟ್ಟಿ ಹರಿಯಬಿಟ್ಟವಳಲ್ಲ ತಾನು.  ಸಮಂಜಸವೆನಿಸಿದ ವಿಷಯದಲ್ಲಷ್ಟೇ ಮನಸ್ಸು ಹರಿಸಿದವಳು . ಈಗ್ಯಾಕೆ ಹೀಗಾಯ್ತು... ? ಕಾಲೇಜ್ ನಲ್ಲೇ ಕೆಲವು ಹುಡುಗರು ನಿನ್ನನ್ನು ಪ್ರೀತಿಸುತ್ತೇನೆಂದು ಪ್ರೇಮ ಪತ್ರ ತಂದು ಕೈಗಿತ್ತಾಗಲೂ ಯಾರ ಮೇಲೆಯೂ ನನಗೆ ಆಕರ್ಷಣೆ ಮೂಡಿರಲಿಲ್ಲ. ಅಪ್ಪ ಅಮ್ಮ ತೋರಿಸಿದ ಹುಡುಗನನ್ನೇ ಮದುವೆಯಾಗಿ ಇಬ್ಬರು ಮುತ್ತಿನಂಥ ಮಕ್ಕಳಾಗಿ ನೆಮ್ಮದಿಯ ಜೀವನ ನಡೆಸುತ್ತಿರುವಾಗ  ಬಿರುಗಾಳಿಯಂಥ ಭಾವನೆಗಳ್ಯಾಕೆ ಶುರುವಾಯ್ತು.


ಇದೆಲ್ಲಾ ಶುರುವಾಗಿದ್ದು ಈಗ 4 ತಿಂಗಳುಗಳ ಹಿಂದೆ. ನನ್ನ ಗಂಡನ ಮನೆಯ ಪರಿಚಯದ ಹುಡುಗ ನನ್ನ ಗಂಡನ ಕಂಪನಿ ಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ. ನಮ್ಮ ಅಪಾರ್ಟ್ಮೆಂಟ್ ನಲ್ಲೇ ಪಕ್ಕದ ಫ್ಲಾಟ್ ಖಾಲಿ ಇದ್ದುದರಿಂದ ಅಲ್ಲೇ ಆತನ ವಾಸ್ತವ್ಯ ಶುರುವಾಯ್ತು. ಶುರುವಿನಲ್ಲಿ ಎಲ್ಲವೂ ಚೆನ್ನಾಗೇ ಇತ್ತು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತ ಮತ್ತು ನನ್ನ ಗಂಡ ಒಟ್ಟಿಗೆ ಕೆಲಸಕ್ಕೆ ಹೋಗುವುದು ಬರುವುದು ವಾಡಿಕೆಯಾಯ್ತು. ಹಾಗೆ ಆತನಿನ್ನೂ ಅವಿವಾಹಕ ನಾದ್ದರಿಂದ ಆಗಾಗೆ ಊಟಕ್ಕೆ ಕರೆಯೋದು , weekend ಗಳಲ್ಲಿ ಒಟ್ಟಾಗಿಯೇ ಹೊರಗೆ ಸುತ್ತಲು ಹೋಗುವುದು..ಅದೆಲ್ಲವೂ ಚೆನ್ನಾಗೇ ಇತ್ತಲ್ಲ .... ಆದರೆ ಯಾವುದೋ ಒಂದು ಒಳ್ಳೆಯದಲ್ಲದ ಗಳಿಗೆಯಲ್ಲಿ ನನಗೇ ಅರಿವಿಲ್ಲದಂತೆ  ಆತನ ಬಗ್ಗೆ ನನಗಿರುವ ಮೆಚ್ಚುಗೆಯ ಭಾವನೆ ಬೇರೆ ರೂಪ ಪಡೆದುಕೊಳ್ಳುತ್ತಿತ್ತು. ಆತ ನನ್ನ ಗಂಡನಿಗಿಂತ ಸುಂದರನೆನಲ್ಲ. ಆದರೆ ಅಪರೂಪದ ವ್ಯಕ್ತಿತ್ವವಿರುವಂಥ ವ್ಯಕ್ತಿ. ಆತನ ಆ ಸಹನಶೀಲತೆ ,  ಸ್ನೇಹಪರತೆ, ಉದಾರತನ, ಎಲ್ಲಕ್ಕಿಂತ ಹೆಚ್ಚಾಗಿ ಆತನಲ್ಲಿನ ಆ ನೈಜತೆ ...ನಂಗೆ ಅವನ ಬಗ್ಗೆ ತುಂಬಾ ಮೆಚ್ಚುಗೆ ಮೂಡಲು ಕಾರಣ. ಆದರೆ ಆ ಮೆಚ್ಚುಗೆಯ ಭಾವನೆ ಒಲವಾಗಿ ಬದಲಾದದ್ದು  ಯಾವಾಗ ಅಂತಲೇ ತಿಳಿಯಲಿಲ್ಲವಲ್ಲ. ಬಹುಶ : ಸ್ತ್ರೀಯರ ಮೇಲೆ ಆತನಿಗಿರುವ ಉನ್ನತ ಗೌರವ , ಕಾಳಜಿಗಳಾ ನನ್ನ ಮನಸ್ಸನ್ನು ಬಲಹೀನವನ್ನಾಗಿ ಮಾಡಿದ್ದು..ಅಥವಾ ಆ ವಾಕ್ಚಾತುರ್ಯವಾ...? ಏನೋ ಗೊತ್ತಾಗಲೇ ಇಲ್ಲ .....ಮದುವೆಗೆ ಮುಂಚೆ ಈ ತರದ ಭಾವನೆಗಳು ಮೂಡಿದ್ದರೆ.....ಅದು ಸುಂದರ ಕಾವ್ಯವಾಗಬಹುದಿತ್ತು .....!!        ಆದರೆ ಈಗ ಮೂಡಿರುವುದು ದುರಂತಕ್ಕೆ ಮುನ್ನುಡಿಯಂತಲ್ಲವೇ ..?   ತಿಂಗಳುಗಳ ಕಾಲ ಆತನ ಬಗ್ಗೆ ನನಗೆ ಮೂಡುತ್ತಿರುವ ಭಾವನೆಗಳನ್ನು ಹೊಡೆದೋಡಿಸಲು ಒದ್ದಾಡಿಬಿಟ್ಟಿದ್ದೆ. ರಾತ್ರಿ ಮಲಗಿದರೂ ನಿದ್ದೆಯ ಬದಲು ಆತನ ಯೋಚನೆಗಳೆ ಬರುತ್ತಿತ್ತಲ್ಲ. ದು:ಖಿತ ಮನಸ್ಸನ್ನು ಶಾಂತಗೊಳಿಸಲಾರದೇ ಸರಿ ತಪ್ಪುಗಳ ತುಲನೆಯಲ್ಲೇ ಬೆಳಗು ಹರಿಸುತ್ತಿದ್ದೆ.  ಗಂಡನ ಪಕ್ಕದಲ್ಲಿ ಮಲಗಿ ಬೇರೋಬ್ಬಾತನ ಬಗೆಗೆ ಯೋಚಿಸುತಿದ್ದ ನನ್ನ ಮನಸ್ಸನ್ನು ಹಿಡಿತದಲ್ಲಿಡಲಾಗದೆ ನನ್ನ ವಿವೇಚನೆ, ನೈತಿಕ ಮೌಲ್ಯಗಳೆಲ್ಲ ಮನದ ಮೂಲೆಗೆ ಸೇರಿಬಿಟ್ಟಿದ್ದವಲ್ಲ.  ಬೇಡ ಹೋಗೆಂದು ಮನದ ಹೊರ ಹಾಕಿ ಕದ ಮುಚ್ಚಿದರೂ ನುಗ್ಗಿ ಬರುವ ಆತನ ನೆನಪು ನನ್ನನ್ನು ತುಂಬಾ  ಕೆಳಗಿಳಿಸಿಬಿಟ್ಟಿತ್ತು.  ಬೇರೆಯವರಲ್ಲಿ ಹೇಳಿಕೊಳ್ಳಲಾರದಂಥ , ನನಗೆ ನಾನೇ ಸಹ್ಯವಾಗದಿರುವಂತ  ಆ ಯಾತನೆಗೆ ಸಿಕ್ಕಿ ನರಳಾಡಿಬಿಟ್ಟೆ.  ಅಷ್ಟರಲ್ಲೇ, ತುಂಬಾ ಸೂಕ್ಷ್ಮಮತಿಯಾದ ಆತ, ನನ್ನ ಮನಸ್ಸಿನಲ್ಲಿನ ಭಾವನೆಗಳನ್ನು ಓದಿಬಿಟ್ಟಿರಬಹುದಾ...ಅನ್ನಿಸಿತ್ತಲ್ಲ.   ಹಾಗೇನಾದರೂ ಆಗಿ, ಅವನಲ್ಲಿ ನಾನು ಗೊಂದಲ ಮೂಡಿಸಿದ್ದರೆ .....ಶುಭ್ರ ಶಾಂತ ಕೊಳದಲ್ಲಿ ಕಲ್ಲೆಸೆದು ಹುಚ್ಚು ಅಲೆಗಳನ್ನೆಬ್ಬಿಸಿದಂತೆ !.  ಆ ಪಾಪವನ್ನೂ ನಾನು ಮಾಡಿಬಿಟ್ಟೆನಾ ಎಂದು ನೋವು ಪಟ್ಟಿದ್ದೆ.   ಹಾಗೇನಾದರೂ ಆಗಿದ್ದಲ್ಲಿ  ಆ ಸ್ನೇಹವೂ ಕಡಿದುಹೋಗುವುದಲ್ಲಾ...ಎಂದು ಕೊರಗಿದ್ದೆ.


ಅಷ್ಟರಲ್ಲೇ, ನನ್ನ ಮಾನಸಿಕ ನರಳಾಟ ನೋಡಲಾರದೇ ದೇವರೇ ಕಳುಹಿಸಿ ಕೊಟ್ಟಂತೆ ಬಂದಿತ್ತು ಆ interview letter. ನನ್ನ ಗಂಡನಿಗೆ ಇನ್ನೊಂದು ಕಂಪನಿಯಲ್ಲಿ ಒಳ್ಳೆಯ ಹುದ್ದೆಗೆ ಇಂಟರ್ವ್ಯೂ ಬಂದಾಗ ನನಗೊಂದು ಜೀವ ಸೆಲೆ ಸಿಕ್ಕಷ್ಟೂ ಸಂತೋಷವಾಗಿತ್ತು.  ಆದರೆ ಪ್ರಸ್ತುತ ಕಂಪನಿ ಯಲ್ಲಿ career growth ಚೆನ್ನಾಗಿದೆ ಎಂಬ ಕಾರಣಕ್ಕೆ ನನ್ನ ಗಂಡ ಬೇರೆ ಕಂಪನಿ ಸೇರಲು ಸಿದ್ದನಿರಲಿಲ್ಲ. ಆಗ ನಾನು ನಡೆದುಕೊಂಡ ರೀತಿ  ನನ್ನ ಗಂಡನಿಗೆ ವಿಚಿತ್ರವೆನಿಸಿರಬೇಕು. ನಾನು ಬೇರೆ ಕಂಪನಿ ಸೇರಲೇಬೇಕೆಂದು ಹಠ ಹಿಡಿದಿದ್ದೆ. ಅತ್ತು ಕರೆದು ರಂಪ ಮಾಡಿದ್ದೆ.  ಬೇರೆ ಕಂಪನಿ ಸೇರದಿದ್ದಲ್ಲಿ ನನ್ನ ಜೊತೆಗೆಂದೂ ಮಾತನಾಡಬೇಡಿ ಎಂದು ಜಗಳವಾಡಿದ್ದೆ.


ಅಂತೂ ನನ್ನ ಒತ್ತಾಯಕ್ಕೆ ಮಣಿದು ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಯಾಯ್ತು. ನನ್ನ ಮನಸ್ಸು ತುಂಬಾ ನಿರಾಳವಾಗಿತ್ತು. ಅದಲ್ಲದೆ ಮನಸ್ಸಿನ ಹತೋಟಿಗೆ ಪ್ರಯತ್ನಿಸುತ್ತಾ ಒಳ್ಳೆಯ ಪುಸ್ತಕಗಳ ಮೊರೆ ಹೋಗಿದ್ದೆ. ದೇವರ ಧ್ಯಾನವನ್ನು ಹೆಚ್ಚಿಸಿದ್ದೆ. ಅಂತೂ ಹೇಗೋ ಮೋಹದ ಮಾಯೆಯ ಸುಳಿಯಲ್ಲಿ ಸಿಕ್ಕಿಬಿದ್ದ ಮನಸ್ಸನ್ನು ಆ ಬಲೆಯಿಂದ ಹೊರಗೆಳೆದು ತಂದಿದ್ದೆ.  ಮೂರ್ಖ ಮನಸ್ಸಿಗೆ ಬುದ್ದಿಹೇಳಿದ್ದೆ.   ಈಗ ಆ  ಊರನ್ನು ಬಿಟ್ಟು ದೂರದೂರಿಗೆ ಹೋಗುತ್ತಿದ್ದೇವೆ.     ನಾಳೆಯಿಂದ ಹೊಸ ಊರು, ಹೊಸ ಮನೆ, ಹೊಸ ಗಾಳಿ, ಹೊಸ ಬೆಳಕು.  ಹೊಸ ಜೀವನವನ್ನು ಪ್ರಾರಂಭಿಸುವ ಉತ್ಸಾಹವಿದೆ.  ಬಿರುಗಾಳಿಯ ರಭಸಕ್ಕೆ ಸಿಕ್ಕಿ ಮುದುಡಿ ಹೋದ ಮೊಗ್ಗನ್ನು ..ಮತ್ತೆ ನೀರೆರೆದು ಹೂವಾಗಿಸಿ ನಗಿಸುವ ಆಸೆಯಿದೆ.  ಎಲ್ಲವನ್ನೂ ಶುರುವಿನಿಂದ ಶುರು ಮಾಡಬೇಕೆನಿಸಿದೆ.


ಎಲ್ಲರ ಜೀವನದಲ್ಲಿಯೂ ಇಂಥದೊಂದು ದುರ್ಬಲ ಕ್ಷಣ ಬರುತ್ತಾ...? ಅಥವಾ ನನ್ನ ಮನಸ್ಸೋಂದೇ ಈ ತರದ ಹುಚ್ಚು ಕುದುರೆಯಾಗಿದ್ದಾ..? ಎಂಬ ಯೋಚನೆ  ಕಾಡುತ್ತಿದೆ ಈಗ..!


ಮನಸ್ಸನ್ನು ನಿರಾಳವಾಗಿಸಿಕೊಂಡು...ಕೆಲವೊಮ್ಮೆ ಅದಾಡುವ ಹುಚ್ಚಾಟದ ಬಗ್ಗೆ ನಗುವಷ್ಟರ ಮಟ್ಟಿಗೆ ಬೆಳೆದಿದ್ದೇನೆ ..! '


" ನಿಖಿತಾ ......ಊರು ತಲುಪಿಯಾಯ್ತು ಎದ್ದೇಳು.." ಎಂಬ ಮಾತುಗಳಿಗೆ ಕಣ್ ತೆರೆದವಳು.....ಮುಂದೆ ನಿಂತಿದ್ದ ಗಂಡ ಮಕ್ಕಳೆಡೆಗೆ  ತುಂಬು ಮನಸಿನಿಂದ ಆತ್ಮೀಯವಾಗಿ  ನಕ್ಕಾಗ....ಆ ನಗುವಿನರ್ಥ ಅವಳಿಗಷ್ಟೆ ತಿಳಿದಿತ್ತು.




-----ಇದು ಕಾಲ್ಪನಿಕ ಕಥೆ

ತಬ್ಬಲಿಯು ನೀನಾದೆ ಮಗುವೇ ..!!!

"ತಬ್ಬಲಿಯು ನೀನಾದೆ ಮಗನೆ,
ಹೆಬ್ಬುಲಿಯ ಬಾಯನ್ನು ಸೇರುವೆ,
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ.."
ನಾನು ಚಿಕ್ಕವಳಿರುವಾಗ ನನ್ನಮ್ಮ ಪ್ರತಿದಿನ  ರಾತ್ರಿ  ಪುಣ್ಯಕೋಟಿಯ ಕಥೆ ಹೇಳುತ್ತಿದ್ದರು. ದಿನವೂ ಆ ಗೋಮಾತೆಯ ದು:ಖ ಕ್ಕೆ ನಾನೂ ಅಳುತ್ತಿದ್ದೆ. ಆ ಕರುವಿಗೆ ಇನ್ನು ಅಮ್ಮನಿರುವಿದಿಲ್ಲವಲ್ಲ ಎಂದು ದು:ಖಿಸುತ್ತಿದ್ದೆ...
ಅದು ಇಪ್ಪತ್ತು ವರ್ಷಗಳ ಹಿಂದೆ ...
ಇಂದೂ ಅಳುತ್ತಿದ್ದೇನೆ...ಅದೇ ವೇದನೆಯನ್ನು, ಅದರಾಳವನ್ನು ಅನುಭವಿಸಿ ಅಳುತ್ತಿದ್ದೇನೆ.. ಅಂದು ಅದು ಕಥೆಯೆಂದು ತಿಳಿಯದೆ ಅಳುತ್ತಿದ್ದೆ...ಇಂದು ಇದು ಕಥೆಯಲ್ಲವೆಂಬುದು ಅರಿವಾಗಿ ಅಳುತ್ತಿದ್ದೇನೆ..
ಆ ಗೋವಿಗಾದ ನೋವು ಹೇಗಿತ್ತೆಂದು  ನನಗೂ  ಅರ್ಥ ಮಾಡಿಸುವ ಆಸೆ  ವಿಧಿಗ್ಯಾಕೆ ಬಂತು ..?
ನನಗಿನ್ನು ನಾಳೆಗಳಿಲ್ಲ..ನನ್ನ ಮಗುವಿಗಿನ್ನು ಅಮ್ಮನಿರುವುದಿಲ್ಲ ..ನನ್ನ ಕರುಳ ಕುಡಿ ಅಮ್ಮನಿಲ್ಲದ ತಬ್ಬಲಿ...ಅದೆಷ್ಟು ಯಾತನೆ  ಕೊಡುವಂಥ ಯೋಚನೆ ಅದು. ..ಆದರದೇ ನಿಜವಾಗುತ್ತಿದೆಯಲ್ಲ...
ಮೇಲಿರುವ   ಸೂತ್ರದಾರಿಗೆ ಯಾಕಿಷ್ಟು ಬೇಗ ನನ್ನೀ ಪಾತ್ರದ ಮೇಲೆ ಬೇಸರ ಬಂತು...? ನನ್ನೀ ಹಸುಗೂಸನ್ನು ಬಿಟ್ಟು ನಾ ಹೇಗೆ ತೊರೆಯಲಿ ಈ  ಜಗವನ್ನು...ಇನ್ನೂ ಜಗತ್ತನ್ನರಿಯದ ಹಸುಳೆ ನನ ಕಂದ..ಅಮ್ಮನ ಬಿಟ್ಟು ಒಂದು ದಿನವೂ ಇರಲಾರ ನನ ಕಂದ ..ಇನ್ನು ಶಾಶ್ವತವಾಗಿ ಅಮ್ಮನಿಲ್ಲದ ಮಗುವಾಗುವುದೆಂಬ ಸತ್ಯವನ್ನು ಹೇಗೆ ನಂಬಲಿ ನಾನೀಗ ?  ....ಯಾರೆಷ್ಟೇ ಮುದ್ದಿಸಿದರೂ ಅಮ್ಮನ ಮಮತೆಯನ್ನು ನನ ಕಂದನಿಗೆ  ಯಾರು ಕೊಡಬಲ್ಲರು...ನಿಜ ...ನನ್ನ ಪತಿ  ನನ್ನ ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದು ..ಆದರೆ ಅವರ ಮುಂಗೋಪ ನನ ಕಂದನಿಗೆ ಹಿಂಸೆಯಾಗಬಹುದಲ್ಲ.
ಬೇರೆ ಯಾರಿಗಾದ್ರೂ  ಕಷ್ಟ ಬಂದಾಗ ಅಯ್ಯೋ ಪಾಪ ಅಂದುಕೊಳ್ಳುತ್ತಿದ್ದೆನಲ್ಲ...ಆದರೆ ಅವರಿಗಾಗುವ ನೋವಿನ ಆಗಾಧತೆಯ ಅರಿವಿರಲೇ ಇಲ್ಲ ಆಗ.. ಈಗ ಅರಿವಾಗುತ್ತಿದೆ ಕಷ್ಟದೊಳಗಿನ ಯಾತನೆಯ ಆಳ.... ಆ ನೋವಿನ ಆಳವನ್ನು ಈಗ ಅಳೆಯುತ್ತಿದ್ದೇನೆ...ಅದೇ  ಆಳದಲ್ಲಿ ಇಳಿಯುತ್ತಿದ್ದೇನೆ...ಇಳಿದು ಇಳಿದು ಅಸ್ತವಾಗುತ್ತಿದ್ದೇನೆ..
ನಾನು ಅಸ್ತಿಯಾದರೆ ಯಾರಿಗೇನೂ ತುಂಬಾ ನಷ್ಟವೇನಿಲ್ಲ.. ತುಂಬಲಾರದ ಅಸ್ತಿಥ್ವವೇನಲ್ಲ ನನ್ನದು..
ಆದರೆ ನನ್ನಮ್ಮನಿಗೆ , ನನ್ನ ಕಂದಮ್ಮನಿಗೆ ಮಾತ್ರ ತುಂಬಲಾರದ ನಷ್ಟವೇ ಅಲ್ಲವೇ ....
ದೇವರೇ ....ನಾನೇನು ಮಾಡಲಿ ಈಗ.. ? ಇನ್ನೈದು ವರ್ಷ ನನ್ನ ಆಯಸ್ಸನ್ನು ಹೆಚ್ಚಿಸಲಾರೆಯಾ ..ನನಗೊಸ್ಕರವಲ್ಲ ...ಅಣು ಅಣುವನ್ನೂ ತಿನ್ನುತ್ತಿರುವ ಈ ಕ್ಯಾನ್ಸರನೊಡನೆ  ಬಾಳಿ  ನಾನೇನೂ ಸಾಧಿಸಲಾಗುವುದಿಲ್ಲ ನಿಜ  !! ಆದರೆ ನನ್ನ ಹಸುಕೂಸಿಗೆ ಅಮ್ಮ ಬೇಕಲ್ಲ ..  ಬಾಲ್ಯ ಕಳೆಯುವ ತನಕ ಅಮ್ಮನ ವಾತ್ಸಲ್ಯ ಬೇಕಲ್ಲ ….
ನಾನು ಸಾಯುತ್ತಿರುವುದಕ್ಕಲ್ಲ ನನಗೀ ಸಂಕಟ. ನನ್ನ ಮಗುವನ್ನು ತಬ್ಬಲಿಯನ್ನಾಗಿ ಮಾಡುತ್ತಿರುವುದಕ್ಕೆ...ನಾನಿಲ್ಲದೆ ನನ್ನ ಮಗಳು ಪಡಬಹುದಾದ ಸಂಕಷ್ಟಗಳ ಬಗ್ಗೆ...ನನ್ನ ನೋವು.
ಎಲ್ಲ ರೋಗಗಳಿಗೂ ಮದ್ದು ಹುಡುಕಿರುವ ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೆಯಾಕೆ ಸೋಲೋಪ್ಪಿಕೊಳ್ಳುತ್ತಿದ್ದಾರೆ?
ಅಥವಾ ಇದೆಲ್ಲ ಆ ದೇವರ ನಾಟಕದ ತಿರುವುಗಳೇ? ...ಅಥವಾ ಆ ವಿಧಿಯ ಆಟವೇ?
ಹ್ಮ: ...ನನ್ನ ಹಣೆಬರಹಕ್ಕೆ ಯಾರನ್ಯಾಕೆ ದೂಷಿಸಲಿ ನಾನು....ಯಾವುದೋ ಜನ್ಮದಲ್ಲಿ ಅಮ್ಮ ಮಗುವನ್ನು ಅಗಲಿಸುವ ಪಾಪವೆಸಗಿದ್ದೇನೋ  ಏನೋ ...ಅದರ ಫಲವಿರಬಹುದು...
ವಿಧಿಯಾಟವನ್ನು ವಿರೋಧಿಸಲು  ನಾನ್ಯಾರು? ..ಇಲ್ಲ ..ಹಾಗಲ್ಲ..ವಿಧಿಯನ್ನು ವಿರೋಧಿಸಲು ಸಾಧ್ಯವೇ ಇಲ್ಲ ...ಹಾಗೊಮ್ಮೆ ವಿರೋಧಿಸಲು ಸಾಧ್ಯವಿದ್ದಲ್ಲಿ ಜಗತ್ತು ಹೀಗಿರುತ್ತಿರಲಿಲ್ಲವಲ್ಲ ........
ಈಗ ನಾನು ಮಾಡಲು ಸಾಧ್ಯವಿರುವುದೊಂದೇ..ಆ ಪುಣ್ಯಕೋಟಿ ಯಂತೆ ಬೇಡಿಕೊಳ್ಳುವುದು ......
"ಅಮ್ಮಗಳಿರಾ ಅಕ್ಕಗಳಿರಾ..
ಎನ್ನ ತಾಯ್ ಒಡ ಹುಟ್ಟುಗಳಿರಾ..
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯ ನೀ ಮಗುವನು..


ಕೋಪ ಬಂದರೆ  ಹೊಡೆಯಬೇಡಿ ,
ಸಹನೆ ಕಳೆದು ಬಯ್ಯಬೇಡಿ ,
ಅಮ್ಮನಿಲ್ಲದ ಕಂದ ನನ ಮಗು,
ತಬ್ಬಲಿಯ ನೀ ಶಿಶುವನೂ  ..........."


ಓದಿ ಮುಗಿಸಿದ ವಾಣಿಯ ಕಣ್ಣುಗಳು ಕೊಳವಾಗಿ ಹರಿಯುತ್ತಿತ್ತು. ಮನಸಲ್ಲಿ ಭರಿಸಲಾರದಂಥ  ಯಾತನೆ. ಕಂಠ ಕಟ್ಟಿಕೊಂಡು ಅಳು ಉಕ್ಕಿಬರುತ್ತಿತ್ತು. ಅದ್ಹೇಗೋ ಸಾವರಿಸಿಕೊಂಡು, ಆ ಡೈರಿಯನ್ನು ಅಲ್ಲೇ ಮುಚ್ಚಿಟ್ಟು ಒಂದರೆಗಳಿಗೆ ಅಲ್ಲೇ ಕುಳಿತಳು. ಸುಮನಾಳ ಆ ಬರಹ ಅವಳ ಯಾತನೆಗೆ ಕನ್ನಡಿ ಹಿಡಿದಂತಿತ್ತು.  ಅತ್ತು ಅತ್ತು ಸುಸ್ತಾಗಿ ಮಲಗಿದ ಅಮೂಲ್ಯಳನ್ನೊಮ್ಮೆ ಕರುಣಾಪೂರಿತವಾಗಿ ನೋಡಿ  ರೂಮಿನಿಂದ ಹೊರಬಂದವಳೇ, ಶಾರದಮ್ಮನಿಗೆ ಮನೆಗೆ ಹೋಗುತ್ತಿರುವುದಾಗಿ ತಿಳಿಸಿ ಮನೆಕಡೆ ಹೆಜ್ಜೆ ಹಾಕಿದಳು.  ದಾರಿಯಲ್ಲಿ ಸಾಗುತ್ತಿರುವ ವಾಣಿಯ ಮನಸ್ಸು 2 ವರ್ಷ ಹಿಂದಕ್ಕೋಡಿತ್ತು.


                                               *                      *                        *
                                                              part 2
ಶಾರದಮ್ಮನ ಅಣ್ಣನ ಮಗಳು ವಾಣಿ.  ಶಾರದಮ್ಮನ ಮನೆಯಿಂದ ನಾಲ್ಕನೇ ಮನೆಯೇ ವಾಣಿಯ ಮನೆ. ಶಾರದಮ್ಮನ ಸೊಸೆ ಸುಮನಾ.   ವಾಣಿ ಮತ್ತು ಸುಮನಾ ಇಬ್ಬರಲ್ಲೂ ಸಂಬಂಧಕ್ಕಿಂತ ಹೆಚ್ಚಾಗಿ ಸ್ನೇಹ ಮೂಡಿತ್ತು. ಇಬ್ಬರದೂ ಒಂದೇ ರೀತಿಯ ಸ್ವಭಾವವಾದ್ದರಿಂದ ಆಪ್ತ ಗೆಳತಿಯರಾಗಿಬಿಟ್ಟಿದ್ದರು. ಇಬ್ಬರಿಗೂ ಒಂದೇ ವಯಸ್ಸಿನ ಮಕ್ಕಳು. ವಾಣಿಯ ಮಗ ಸುಹಾಸ್ ಹಾಗೂ ಸುಮನಾಳ  ಮಗಳು ಅಮೂಲ್ಯ ಇಬ್ಬರಿಗೂ ಆಗಿನ್ನೂ 1  ವರ್ಷ.
ಒಂದಿನ ಮಾರ್ಕೆಟ್ ಗೆ ಹೋಗುವಾಗ ಸುಮನಾ ತುಂಬಾ ಬೇಜಾರಿನಿಂದಿರುವಂತೆ ಅನಿಸಿತು ವಾಣಿಗೆ. ಅದನ್ನೇ ಕೇಳಿದಳು. ಆದರೆ ತನ್ನ ಬೇಜಾರನ್ನು ಬೇರೆಯವರಲ್ಲಿ ಹೆಚ್ಚಾಗಿ ಹಂಚಿಕೊಳ್ಳದ ಸುಮನಾ   ' ಏನಿಲ್ಲ ಬಿಡು ವಾಣಿ, ಸ್ವಲ್ಪ ತಲೆನೋಯುತ್ತಾ ಇದೆ ಅಷ್ಟೆ ' ಎಂದು ಹಾರಿಕೆಯ ಉತ್ತರ ಕೊಟ್ಟಳು  .
ಆದರೆ ವಾಣಿ ಬಿಡಲ್ಲಿಲ್ಲ..'ಯಾಕೆ ನನ್ನಲ್ಲೂ ಹೇಳುತ್ತಿಲ್ಲ ಸುಮನಾ ನೀನು. ನಂಗೊತ್ತಿದೆ ಏನೋ ವಿಷಯ ಇದೆ. ಆದರೆ ನೀನು ನನ್ನಿಂದ ಮುಚ್ಚಿಡ್ತಾ ಇದೀಯಾ.'
'ಏನಿಲ್ಲ ಬಿಡು ವಾಣಿ '
ನನಗೆ ಗೊತ್ತು ಸುಮನಾ ...ಮೊನ್ನೆ ನಾನು ನಿಮ್ಮ ಮನೆಗೆ ಬಂದಾಗ ನೀನು ಅಳುತ್ತ  ಏನೋ ಹೇಳುತ್ತಿದ್ದೆ...'ನನಗೆ ಹೊಡೆದುಬಿಟ್ರಲ್ಲ ಅತ್ತೆ' ಎನ್ನುತ್ತಾ ಅಳುತ್ತ ಹೋಗಿದ್ದು ಕೇಳಿತು. ಶಾರದತ್ತೆ ನಿನಗೆ ಹೊಡೆದರಾ ಎಂದು ಶಾಕ್ ಆಯ್ತು. ಆಮೇಲೆ ನಾನು ಒಳಗಡೆ ಬರಲೇ ಇಲ್ಲ ...ಹಾಗೆ ವಾಪಸ್ ಬಂದುಬಿಟ್ಟೆ. ಆಮೇಲೆ ನಿನ್ನಲ್ಲಿ ಕೇಳೋಣ ಅಂದುಕೊಂಡಿದ್ದೆ. ವಾಣಿ ಹಾಗೆ ಕೇಳಿದಾಗ ಸುಮನಾಗೆ ಅದುಮಿಟ್ಟ ನೋವೆಲ್ಲ ಹೊರ ಉಕ್ಕಿ ಬಂದಂತಾಯ್ತು.
ವಾಣಿ ತುಂಬಾ ಒತ್ತಾಯಿಸಿದ ಮೇಲೆ ಸುಮನಾ ಹೇಳತೊಡಗಿದಳು. " ಏನಿಲ್ಲ ವಾಣಿ, ಹೇಳಲು ಹೋದರೆ ಇವೆಲ್ಲ ತುಂಬಾ ಚಿಕ್ಕ ವಿಷಯಗಳು.  ಆದರೂ ಕೆಲವೊಮ್ಮೆ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತವೆ.  ಸಚಿನ್ ನ ಕೀಟಲೆಗಳು ಇತ್ತೀಚೆಗೆ ತುಂಬಾ ಜಾಸ್ತಿ ಆಗಿದೆ ವಾಣಿ. ಅಮೂಲ್ಯಳಿಗಂತೂ ತುಂಬಾ ಗೋಳು ಕೊಡುತ್ತಾನೆ. ಮೊನ್ನೆ ಒಂದು ತಂಬಿಗೆಯ ತುಂಬಾ ತಣ್ಣೀರು ತುಂಬಿ ಅದರಲ್ಲಿ ಮರಳು ತುಂಬಿ ಆ ನೀರನ್ನೆಲ್ಲ ಅಮೂಲ್ಯಳ ತಲೆಯ ಮೇಲೆ ಸುರಿದಿದ್ದಲ್ಲದೇ ಅವಳಿಗೆ ತಂಬಿಗೆಯಿಂದಲೇ ಹೊಡೆದುಬಿಟ್ಟ. ತಲೆಯಲ್ಲಿ ರಕ್ತ ಕೂಡ ಬಂತು. ಅದಕ್ಕೆ ಸಚಿನ್ ಗೆ ನಾನು ಒಂದು ಏಟು ಕೊಟ್ಟೆ .  ಅದಕ್ಕೆ ನಮ್ಮತ್ತೆ ನನಗೆ ಹೊಡೆದು ಬಿಟ್ರು. ಅದಕ್ಕೆ ಆವತ್ತು ನಾನು ಅಳುತ್ತಿದ್ದುದು" ಎನ್ನುತ್ತಾ ಕಣ್ಣೋರೆಸಿಕೊಂಡಳು ಸುಮನ.


ಸಚಿನ್ ಶಾರದಮ್ಮನ ಮಗಳು ಪವಿತ್ರಾ ಳ ಮಗ. ಪವಿತ್ರ ಉದ್ಯೋಗ ಮಾಡುತಿದ್ದುದರಿಂದ ಮಗ ಸಚಿನ್ ನನ್ನು ಅಮ್ಮ ಶಾರದಮ್ಮನ ಬಳಿಯೇ ಬಿಟ್ಟಿದ್ದಳು.
ಸುಮನ ಹೆಣ್ಣು ಮಗುವನ್ನು ಹೆತ್ತಾಗ ಶಾರದಮ್ಮನಿಗೆ ಸ್ವಲ್ಪ ನಿರಾಶೆಯಾಗಿತ್ತು. ಮಗು ಅಮೂಲ್ಯಳ ಮೇಲೆ ತಾತ್ಸಾರವಿರದಿದ್ದರೂ ಮೊಮ್ಮಗಳು ಎಂದು ಮುದ್ದಾಡುವಂತ ಪ್ರೀತಿಯೂ ಇರಲಿಲ್ಲ. ಈಗ ಮೊಮ್ಮಗ ಹತ್ತಿರವೇ ಇದ್ದುದರಿಂದ ಅವರ ಪ್ರೀತಿಯೆಲ್ಲ ಮೊಮ್ಮಗನಿಗೆ ಮೀಸಲಾಗಿತ್ತು.


" ನನಗೆ ಸಚಿನ್ ನ ಮೇಲೆ ಕೋಪವಿಲ್ಲ ವಾಣಿ. ಅವನೂ ಕೂಡ ಚಿಕ್ಕ ಹುಡುಗ. ತಿಳಿಯದೆ ಈ ರೀತಿಯ ಕೀಟಲೆಗಳನ್ನು ಮಾಡುತ್ತಾನೆ. ಆದರೆ ನಾವು ದೊಡ್ಡವರು ಅದು ತಪ್ಪು ಎಂದು ಹೇಳದಿದ್ದರೆ ಮಕ್ಕಳು ತಾವು ಮಾಡಿದ್ದೇ ಸರಿ ಎಂದುಕೊಳ್ಳುವುದಿಲ್ಲವೇ?. ಈಗಾಗಲೇ ಅವನಿಗೆ ಆ ರೀತಿಯ ಯೋಚನೆ ಬಂದಿದೆ. ಕೆಲವೊಮ್ಮೆ ವಯಸ್ಸಿಗೆ ಮೀರಿದಂತ ಮಾತುಗಳನ್ನಾಡ್ತಾನೆ. ಎಲ್ಲೆ ಮೀರಿದಂತ ಕೀಟಲೆಗಳನ್ನು ಮಾಡ್ತಾನೆ. ಮಕ್ಕಳು ತಪ್ಪು ಮಾಡಿದಾಗ ದೊಡ್ಡವರು ತಿಳಿ ಹೇಳದೆ ಇದ್ದರೇ ಅದು ತಪ್ಪು ಎಂದು ಮಕ್ಕಳಿಗೆ ಹೇಗೆ ತಾನೇ ಅರ್ಥವಾಗುತ್ತದೆ  ? ಆಗ ಮಕ್ಕಳಿಗೆ ಒಳ್ಳೇ ಸಂಸ್ಕಾರ ನೀಡುವಲ್ಲಿ ನಾವು ವಿಫಲವಾದಂತಲ್ಲವೇ ?.  ಅವನೇನೂ ಮಾಡಿದರೂ ನಾನು ಏನೂ ಹೇಳುವಂತಿಲ್ಲ. ಅಮೂಲ್ಯಳನ್ನು ಅವನ ಕೀಟಲೆಗಳಿಂದ ಕಾಯ್ದುಕೊಳ್ಳುವುದೇ ದೊಡ್ಡ ಕೆಲಸವಾಗಿದೆ ನನಗೆ. ಇವೆಲ್ಲ ತುಂಬಾ ಚಿಕ್ಕ ವಿಷಯಗಳು ನಿಜ. ಆದರೆ ದೊಡ್ಡವರು ಈ ರೀತಿಯ ತಾರತಮ್ಯ ಮಾಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ವಾಣಿ". ಎಂದು ನೊಂದುಕೊಂಡಳು ಸುಮನಾ.
ಮುಂದೆ ಕೆಲವು ಸಂದರ್ಭಗಳಲ್ಲಿ ಶಾರದಮ್ಮನ ತಾರತಮ್ಯ ವಾಣಿಗೂ ಅರಿವಾಗಿತ್ತು.  ಏನೇ ತಿಂಡಿ ತಂದರೂ ಅದು ಮೊಮ್ಮಗನಿಗೆ ತಿಂದು ಉಳಿದರೆ ಮೊಮ್ಮಗಳಿಗೆ ಸಿಗುತ್ತಿತ್ತು.  ಮೊಮ್ಮಗ ಏನೂ ಮಾಡಿದರೂ ತಪ್ಪಲ್ಲ. ಆದರೆ ಮೊಮ್ಮಗಳು ಮಾಡಿದ್ದೇಲ್ಲವೂ ತಪ್ಪು...ಹೆಣ್ಣಾಗಿ ಹುಟ್ಟಿದ್ದಕ್ಕೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂಬುದು ಶಾರದಮ್ಮನ ಅಂಬೋಣ .
ಹಿಂದಿನದನ್ನು ಯೋಚಿಸುತ್ತ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ವಾಣಿಗೆ ಮನೆ ತಲುಪಿದ್ದೂ ತಿಳಿಯಲಿಲ್ಲ.  ಹಿಂದಿನ ದಿನವಷ್ಟೆ ತೀರಿಹೋದ ಸುಮನಾಳ ನೆನಪೇ ಅವಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು.        ಸುಮನಾ ಳ ಡೈರಿಯನ್ನು ಆಗಷ್ಟೆ ಓದಿ ಬಂದಿದ್ದರಿಂದ ಮಗು ಅಮೂಲ್ಯಳ ಭವಿಷ್ಯದ ಯೋಚನೆ ಕಾಡತೊಡಗಿತ್ತು.
  ಶಾರದಮ್ಮನ ತಾರತಮ್ಯದ ಅರಿವಿದ್ದ ವಾಣಿಗೆ ಮಗಳನ್ನು ಇಂಥ ಪರಿಸರದಲ್ಲಿ ಬಿಟ್ಟು ಹೋಗುವುದಕ್ಕೆ ಸುಮನಾ ಪಟ್ಟ ಯಾತನೆಯ ಅರಿವಾಗಿತ್ತು. ವಾಣಿಯ ಮನಸ್ಸು ಯೋಚನೆಯ ಗೂಡಾಗಿತ್ತು.  ಕಾಲ ಎಷ್ಟು ಬದಲಾಗುತ್ತಿದೆ. ಈಗಿನ ದಿನಮಾನದಲ್ಲಿ ಹೆಣ್ಣು ಮಗು ಗಂಡು ಮಗು ಎಂದು ತಾರತಮ್ಯ ತೋರುವವರು  ಕಡಿಮೆ. ಆದರೂ ಕೆಲ ಜನರು ಶಾರದತ್ತೆಯಂಥವರು ಇನ್ನೂ ಆ ರೀತಿಯ ಮನೋಭಾವದಿಂದ ಹೊರಬಂದಿಲ್ಲ. ವಿಚಿತ್ರವೆಂದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೆ  ಹೆಣ್ಣುಮಗು ಹುಟ್ಟಿದ ತಕ್ಷಣ ತಾತ್ಸಾರ ತೋರುತ್ತಾರಲ್ಲಾ......ಎಂದುಕೊಂಡಳು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ನಿಜವಿರಬಹುದು ಅನ್ನಿಸಿತು.
                                                                    

ಒಲವ ಭಾವ

ನೀಲಿ ಆಗಸದಿಂದ ಸೂರ್ಯ ಜಾರುವ ಮುನ್ನ
ನನ್ನಿನಿಯನಾಗಮನ ವಾಗಲೆಂಬಾಸೆ ,
ಬಂದ ಕೂಡಲೇ ಕೂಡಿ ಕಡಲ ತೀರಕೆ ಓಡಿ
ಸಂಜೆ ಸೂರ್ಯನ ಕೆಂಪ ಸವಿಯಲೆನಗಾಸೆ ,
ಕೈಯೊಳಗೆ ಕೈ ಬೆಸೆದು ಮಂದ ಹೆಜ್ಜೆಯನಿಡುತ
ಮೌನವಾಗಿಯೇ ಜಗವ ಮರೆತುಬಿಡುವಾಸೆ,
ಸಂಜೆ ತಂಗಾಳಿ ನನ್ನವನ ಮುಂಗುರುಳ ತೀಡಿದಾಗ
ಕಣ್ಣಲ್ಲೆ ಒಲವ ಧಾರೆಯ ಹರಿಸಿಬಿಡುವಾಸೆ,
ನಯನಗಳು ಒಂದಾಗಿ ಮಂದಹಾಸವ ಬೀರೆ,
ಭಾವಗಳು ಬೆರೆತು ಲೀನವಾಗಲೆಂಬಾಸೆ,

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com