ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ನೆನಪುಗಳೇ ಹೀಗೆ

7061475
(ಚಿತ್ರ ಕೃಪೆ : 123RF.com)

ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ

ನೆನಪುಗಳೆ ಹಾಗೆ ಕೆಲವೊಮ್ಮೆ ಜಡಿಮಳೆಯಂತೆ
ಬೇಡವೆಂದರೂ ಬಿಡದೆ ಸುರಿದು
ತಿಳಿಯಾದ ಕೊಳವನು ಕಲಕಿ
ಕೊಳೆಯ ರಾಡಿಯೆಬ್ಬಿಸಿಬಿಡುತ್ತವೆ.

ನೆನಪುಗಳೆ ಹಾಗೆ ಕೆಲವೊಮ್ಮೆ ಮುಂಗಾರು ಮಳೆಯಂತೆ
ಪರಿಮಾಣದಲಿ ಸುರಿದು
ಪ್ರತಿಹೆಜ್ಜೆಯನೆಚ್ಚರಿಸಿ ಪಕ್ವತೆಯೆಡೆ ನಡೆಸಿ
ನವತೆನೆಗಳ ಬೆಳೆಸಿ  ಹಸನಾಗಿಸುತ್ತವೆ.

ನೆನಪುಗಳೆ ಹಾಗೆ ಅನಿಯಮಿತ ಮಳೆಯಂತೆ
ಶುಭ್ರಗೊಳಿಸಿದಂತೆಯೇ
ಕಲಕಿಯೂ ಬಿಡುತ್ತವೆ ಒಮ್ಮೊಮ್ಮೆ
ಮಳೆಸುರಿದ ನಂತರದ ಹೊಂಗಿರಣದ ಅನುಭವ ನೀಡಿ
ಹೊಸಕನಸುಗಳಿಗೆ ನಾಂದಿಯಾಗುತ್ತವೆ ಕೆಲವೊಮ್ಮೆ.


(ಕೆಂಡಸಂಪಿಗೆಯಲ್ಲಿ ಪ್ರಕಟಿತ. http://kendasampige.com/article.php?id=4939)

ಸಂಸಾರ ಸಮರ – ಮಡದಿಯ ಮುನಿಸು

ಛಾಯಾಚಿತ್ರ ಕೃಪೆ : ಅಂತರ್ಜಾಲ.

ಮುನಿಸು ತರವೇ ಮನದನ್ನೆ ಅಂದದಾ ಮೊಗದಲ್ಲಿ
ಕಿಡಿ ಕಾರುತಿವೆ ನಯನಗಳು ಸಿಡಿವ ಸೂರ್ಯನಂತೆ
ನಗು ಸೂಸುವಾ ಮೊಗವಿಂದು ಉಗ್ರವಾಗಿದೆಯಲ್ಲ
ಕೋಪಶಮನಗೊಳಿಸುವ ದಾರಿಯನು ಹೇಳೇ ಕಾಂತೆ .


ನನ್ನ ಬೈದು, ನೀ ನಕ್ಕು ಹಗುರವಾಗಬಹುದಾದರೆ,
ಬೈಗುಳವೂ  ಕೂಡ ಹಿತವೆನಗೆ, ನಗುತಿರು ಸುಮತಿ 
ನನ್ನ ಹಂಗಿಸಿ ನೀನು ತೃಪ್ತಿ ಪಡುವುದಾದಲ್ಲಿ
ಆ ತೃಪ್ತಿಯೂ ಸದಾ ನಿನಗಿರಲಿ ಗೆಳತಿ.

ನಿನ್ನ ಮನದಲೇ ನೆಲೆಸಿ ಆಳ ಅಳೆದಿಹೇನು ನಾನು .....
ಕಲ್ಮಷವೊಂದಿಷ್ಟಿಲ್ಲ ತಿಳಿದಿಹುದು ಎನಗೆ..
ನೀ ಹೇಳಿದಾ ಮಾತ ಕೆಳದೇ ಇದ್ದಾಗ
ಕೆಂಪೆರುವ ಮುಖದ ಕೋಪವನು ಕಂಡಿಲ್ಲವೇನು

ವಿರಸವಿಲ್ಲದಿರೆ ಸೊಗಸಿಲ್ಲ ಸುಂದರಿ
ಉಪ್ಪಿಲ್ಲದಾ ಸಾರು ಸಪ್ಪೆ ಸಪ್ಪೆ....
ಸರಸದಾ ನಡುವೆ ವಿರಸವೊಂದಿಷ್ಟಿರೆ
ಊಟದ ಜೊತೆಗಿರುವ ಉಪ್ಪಿನಕಾಯಿಯಷ್ಟೆ.

ಸಿಟ್ಟು ತಣಿಯುವ ಮೊದಲೇ
ಬಳಿ ಬರುವೆ ಅಳು ಮುಖದಿ
ಸಂತೈಸಬೇಕು ನಾನೇ ನಿನಗೆ.
ಬಯ್ದವಳು ನೀನೆ ಅಳುವವಳು ನೀನೆ.
ಮಗುವಾಗಿ ಬಿಡುವೆ ನೀನಾಗ ನನ್ನೊಡನೆ…

ನಿನ್ನ ನೆನಪು

  
ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ
ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ
ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ
ತಟ್ಟನೆ  ಸುಳಿಯುವುದು  ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ
ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ
ರಾತ್ರಿ ರಾಣಿಯು ಅರಳಿ  ಘಮ ಘಮಿಸಿ ಮತ್ತೇರಿಸಿದಾಗ
ಚಿತ್ತವನು ಸೆಳೆಯುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ  ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
ನೆರಳಿನಂತಹ ಜೊತೆಗಾತಿ ನಿನ್ನ ನೆನಪು
ಹಿತವಾಗಿ ಕಾಡುತಿದೆ   ನಿನ್ನ ನೆನಪು
ಮೈಮರೆಸಿ ನಗಿಸುತಿದೆ ನಿನ್ನ ನೆನಪು

ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?


ಚಿತ್ರಗಳು : ಶಶಿಧರ್ ಬಂಗೇರ.



ಮುಗ್ಧ ಕಂಗಳ ತೆರೆದು
ಜಗವ ದಿಟ್ಟಿಸುತಿರುವ
ಈ ಪುಟ್ಟ ಬಾಲರಿಗೂ
ಕನಸುಗಳಿವೆಯೇ ?

ಬಾಲ್ಯವೇ ಬರಡಾಗಿರುವಾಗ
ಬೃಂದಾವನವೇಲ್ಲಿಯದು
ಚಿಕ್ಕ ಪುಟ್ಟ ಆಸೆಗಳಿಗಾದರೂ 
ಆಸರೆಯಿದೆಯೇ ?

ಆಟಿಕೆಗಳ ಆಸೆಯಲ್ಲ
ಮಹಲು ಮನೆಗಳದಲ್ಲ
ಕಾಣಿಸದೇ ಆ  ಕಂಗಳ ಆಸೆ
ತಿನ್ನೋ ಹಣ್ಣುಗಳಿಗಾಗಿ...
ಗಾಜಿನೊಳಗಿನ ಆ 
ಸಿಹಿ ತಿಂಡಿಗಳಿಗಾಗಿ...

ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ  ಉಡುಪಿಗಾಗಿ.

ಮುಗಿಲೆತ್ತರಕ್ಕಿಲ್ಲ..
ಈ ಮುಗ್ಧ ಬಾಲರ ಕನಸು
ಹರಡಿಕೊಂಡಿವೆ ಇಲ್ಲೇ ಅನಾಥವಾಗಿ
ಕಾರು ಬೈಕು ಬೇಕೆಂದಲ್ಲ ಈ ಮಕ್ಕಳಾ ಕೂಗು 
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..

(ಸಹ ಬ್ಲಾಗಿಗರಾದ ಶಶಿಧರ ಬಂಗೇರ (http://heegesumsumne.blogspot.com) ಅವರ ಬ್ಲಾಗ್ ನಲ್ಲಿಯ ಕೆಲವು ಮನಕಲಕುವ ಛಾಯಾಚಿತ್ರಗಳನ್ನು ನೋಡಿ ಬರೆದ ಕೆಲವು ಸಾಲುಗಳು.)

ಹೀಗೊಂದು ಪ್ರೀತಿಯ ಆತಿಥ್ಯ .....!! ನೆನಪುಗಳ ಬುತ್ತಿಯಿಂದ ...

ನನಗೆ ಆಗಷ್ಟೇ ಮೊದಲ ವರ್ಷದ ಡಿಗ್ರೀ ಯ ಕ್ಲಾಸ್ ಗಳು ಮುಗಿದು ರಜ ಶುರುವಾಗಿತ್ತು. ಚೆನ್ನೈ ನಲ್ಲಿರುವ ನಮ್ಮತ್ತೆಯಿಂದ ಫೋನ್ ಮೇಲೆ ಫೋನ್, ಈ ಸಲದ ರಜವನ್ನು ಚೆನ್ನೈ ನಲ್ಲಿ ಕಳೆಯಬಹುದು  ಬಾ ಎಂದು ಒಂದೇ ಸಮನೆ ಒತ್ತಾಯ. ಸರಿ ಎಂದು ನಾನು ಎರಡು ದೊಡ್ಡ ಬ್ಯಾಗ್ ಗಳ ಜೊತೆ ಚೆನ್ನೈ ತಲುಪಿಯಾಯ್ತು.  ಸೊಸೆಯಂದಿರು ಅಂದರೆ ನಮ್ಮತ್ತೆಗೆ ಪ್ರಾಣ.  ನಾನು ಹೋದ ಎರಡೇ ದಿನದಲ್ಲಿ ತಮ್ಮ ಸ್ನೇಹಿತ ಬಳಗಕ್ಕೆಲ್ಲ ' ತನ್ನ ಅಣ್ಣನ ಮಗಳು' ಎಂದು ಪರಿಚಯ ಮಾಡಿಕೊಟ್ಟಿದ್ದಾಯ್ತು. ನನಗೋ ಮಾತಿಗೆ ಮೊದಲು ನಗು , ಮಾತಿನ ನಂತರ ನಗು    ...ಸ್ವಲ್ಪ ನಗು ಜಾಸ್ತಿ. ಎಂದಿಗೂ ಹೀಗೆ ನಗುತ್ತಿರಮ್ಮ ಎಂಬ ಹಾರೈಕೆಯೂ ಹಿರಿಯರಿಂದ ಸಿಕ್ಕಿತು.ಚೆನ್ನೈ ನಲ್ಲಿರುವ ಕನ್ನಡ ಬಳಗ ಸಂಘದಲ್ಲಿ ನಮ್ಮತ್ತೆ ಹಾಗೂ ಮಾವ ಸಕ್ರಿಯ ಸದಸ್ಯರು, ನಾನು ಹೋದ ಸಮಯದಲ್ಲಿ ಮಾವ ಬಳಗದ ಸೆಕ್ರೆಟರಿ ಕೂಡ ಆಗಿದ್ದರು. ಹಾಗಾಗಿ, ಕನ್ನಡ ಬಳಗದ ಎಲ್ಲಾ ಚಟುವಟಿಕೆಗಳಲ್ಲಿ ಅತ್ತೆ ಮಾವರ ಜೊತೆ ನನಗೂ ಭಾಗವಹಿಸುವ ಅವಕಾಶ ಸಿಕ್ತು. ನಮ್ಮತ್ತೆಯ  ಸ್ನೇಹಿತರ  ಜೊತೆಗೆ ಕಳೆದ ಕೆಲ ಕ್ಷಣಗಳು, ಅವರ ಜೊತೆಗಿನ  ಒಡನಾಟ  ಕೆಲವೇ ದಿನಗಳದ್ದಾದರೂ  ಜೀವನಪೂರ್ತಿ ಮರೆಯಲಾರದಂಥ ಕೆಲವು ಅಪೂರ್ವ ಅನುಭವಗಳನ್ನಿತ್ತಿದೆ. ಅವರೆಲ್ಲರು ನನ್ನಲ್ಲಿ ತೋರಿದ ಆ ಪ್ರೀತಿ ಜೀವನಾನುಭವದ ಪುಟಗಳಲ್ಲಿ ಮಧುರತೆಯನ್ನು ತುಂಬಿದೆ.
ನನ್ನತ್ತೆ ಮನೆಯಿಂದ ಹತ್ತಿರವೇ ಇದ್ದ ಇನ್ನೊಬ್ಬ ಕನ್ನಡಿಗರು ಮೈಸೂರಿನ ನಿವೃತ್ತ ದಂಪತಿಗಳು. ನಮ್ಮತ್ತೆ ಅವರನ್ನು  ಅಂಕಲ್ ಆಂಟಿ  ಎಂದು ಕರೆಯುತ್ತಿದುದರಿಂದ ನನಗೂ ಅವರು ಅಂಕಲ್ ಆಂಟಿ ಆದರು.. ಅತ್ತೆ ಮನೆ ಹತ್ತಿರವೇ ಅವರ ಮನೆ ಇದ್ದುದರಿಂದ ದಿನಕ್ಕೊಮ್ಮೆ ಅವರ ಮನೆಗೆ ಹೋಗಿ ಬರುವುದು ಅಭ್ಯಾಸವಾಯ್ತು.ಅವರು ನಮಗೆ ತೋರುತ್ತಿದ್ದ ಪ್ರೀತಿ, ಆಪ್ಯಾಯಮಾನತೆಯನ್ನು ಇಲ್ಲಿ ಶಬ್ಧಗಳಿಂದ ವಿವರಿಸಲು ನನ್ನಿಂದ ಸಾಧ್ಯವಿಲ್ಲ. ಅವರು ನಮ್ಮನ್ನು ಒಂದಿನ ಊಟಕ್ಕೆ ಕರೆದಾಗ ನಾವು ಸಂತೋಷದಿಂದ ಒಪ್ಪಿಕೊಂಡು ಅವ್ರ ಮನೆಗೆ ಊಟಕ್ಕೆ ಹೋದೆವು.
ಸ್ಟಾರ್ಟರ್ ಗೆ ಟೊಮ್ಯಾಟೊ ಸೂಪ್ ಮಾಡಿದ್ರು. ತುಂಬಾ ರುಚಿಯಾಗಿತ್ತು. " ತುಂಬಾ ರುಚಿಯಾಗಿದೆ ಆಂಟೀ ..ನಂಗೆ ಇದರ recipe ಕೊಡಿ ನಾನೂ ಮನೆಗೆ ಹೋಗಿ ಟ್ರೈ ಮಾಡ್ತೀನಿ" ಅಂದೆ. ಆವ್ರು ಖುಷಿಯಾಗಿ ಮುದ್ದಾಮ್ ಹೇಳ್ಕೊಡ್ತೀನಮ್ಮ ಅಂತ ಹೇಳ್ತಾ ನಂಗೆ ಇನ್ನೊಂದಿಷ್ಟು ಸೂಪ್ ಬಡಿಸಿಬಿಟ್ರು. ಓಹ್ ! ಸರಿ ....ಚೆನ್ನಾಗಿತ್ತಲ್ಲಾ ...ಮುಗಿಸಿದೆ.
ಸೂಪ್ ನ ನಂತರ ಮೊಸರೊಡೆ ಬೌಲ್ ತಂದು ಮುಂದಿಟ್ಟರು. " ಇದೇನು ಆಂಟಿ ನಾನು ಇದುವರೆಗೂ ತಿಂದಿಲ್ಲ" ಅಂದೆ. "ಇದು ಮೊಸರೊಡೆ ...ಚೆನ್ನಾಗಿರುತ್ತೆ ತಿನ್ನಮ್ಮ" ಅಂದ್ರು.  ರುಚಿ ನೋಡಿ ಪರವಾಗಿಲ್ಲ ಚೆನ್ನಾಗಿದೆ ಎಂದು ಮೊಸರೊಡೆ ಮುಗಿಸಿದ್ದಾಯ್ತು.ಆಮೇಲೆ ಪೂರಿ ಸಾಗು... "ಅಯ್ಯೋ! ನಂಗೆ ಹೊಟ್ಟೆ ತುಂಬೊಯ್ತು ಆಂಟಿ ..ಒಂದೇ ಪೂರಿ ಸಾಕು" ಅಂದ್ರೂ ಕೆಳದೇ ಎರಡು ಪೂರಿ ಬಡಿಸಿದ್ರು. ಅದನ್ನೂ ತಿಂದಿದ್ದಾಯ್ತು.
ಅದು ತಿಂದಾದ ಮೇಲೆ ಪುಲಾವ್ ತಂದಾಗ ನಂಗೆ ಆಗ್ಲೇ ಹೊಟ್ಟೆ ತುಂಬಿದೆ. ಪುಲಾವ್ ಬೇಡ ಅಂದೆ. "ಅದಹೇಗಾಗತ್ತಮ್ಮ, ಅನ್ನಾನೇ ತಿನ್ನದೇ ಊಟ ಹೇಗೆ ಮುಗಿಸ್ತೀಯಾ ..ಸ್ವಲ್ಪ ತಿನ್ನು" ಅನ್ನುತ್ತಾ ಬಡಿಸಿದಾಗ ಬೇರೆ ವಿಧಿ ಇಲ್ದೇ ತಿಂದೆ.
ಅದಾದ ಮೇಲೆ ಜಾಮೂನ್ ಬೌಲ್  ತಂದು ಟೇಬಲ್ ಮೇಲಿಟ್ಟಾಗ  ನಾನು ಸುಸ್ತು ...!!
" ನಂಗೆ ಎದ್ದು ಓಡಿ ಹೋಗೋಣ ಅನಸ್ತಾ ಇದೆ ಆಂಟಿ " ಅಂದೆ ನಗುತ್ತಾ ..
"ನಿಂಗೆ ಎಷ್ಟು ಸೇರುತ್ತೋ ಅಷ್ಟೇ ತಿನ್ನಮ್ಮ ..ಆದ್ರೆ ಸ್ವಲ್ಪನೂ ತಿನ್ನದೇ ಮಾತ್ರ ಏಳಬೇಡ " ಅಂದ್ರು. 
ಅಯ್ಯೋ ..ಇನ್ನು ನನ್ನತ್ರ ಸಾಧ್ಯಾನೆ ಇಲ್ಲಾ ಆಂಟಿ " ಅಂದೆ.
ಹಾಗೆ ಹೇಳಬಾರದಮ್ಮ ...ನಿಂಗೋಸ್ಕರನೇ ಮಾಡಿದ್ದು ..ಸ್ವಲ್ಪ ತಿನ್ನು ಎನ್ನುತ್ತಾ ಬಡಿಸಿದಾಗ ನಂಗೆ ಅಳು ಬರುವುದೊಂದು ಬಾಕಿ.
ಆದ್ರೂ ಅವರು ಪ್ರೀತಿಯಿಂದ ನಮಗೋಸ್ಕರವೇ ಶ್ರಮ ಪಟ್ಟು ಮಾಡಿದ್ದಾರಲ್ಲ. ಅವ್ರ ಮನಸ್ಸು ನೋಯಿಸಲಾಗದು ನನ್ನಿಂದ...ಹೇಗೋ ಸ್ವಲ್ಪ ತಿಂದೆ.
ಅಲ್ಲಿಯವರೆಗೂ ನಗುತ್ತಾ ಮಾತಾಡ್ತಾ ಕೂತಿದ್ದ ಅಂಕಲ್ ಎದ್ದು ಬಂದು ಮಾರ್ಕೆಟ್ ನಿಂದ ತಂದ ಜಿಲೇಬಿ ಎದುರಿಟ್ಟಾಗ ...ನಾನು ನಿಜಕ್ಕೂ ಗಾಬರಿ ಬಿದ್ದೆ..!!  ಅಂಕಲ್ ..ನಾನು ಇನ್ನೂ ಏನಾದ್ರೂ ತಿಂದ್ರೆ ನಂಗೆ ನಡೆದು ಹೋಗೋಕ್ಕಾಗಲ್ಲ...ಯಾರಾದ್ರೂ ಹೊತ್ತು ಹೋಗಬೇಕಷ್ಟೆ..ಅಂದರೂ ಕಿವಿಗೆ ಹಾಕಿಕೊಳ್ಳದೆ ಒಂದು ಪೀಸ್ ಕೈಯಲ್ಲೇ ತಗೊ..ಟೇಸ್ಟ್ ಕೂಡ ನೋಡದೆ ಹಾಗೆ ಬಿಡಬೇಡ ಅಂದಾಗ ನನಗೆ ಕಣ್ಣಲ್ಲಿ ನೀರು ಬಂದಿತ್ತು ಅನಸತ್ತೆ.  
ಆ ಪ್ರೀತಿಯನ್ನು ಹೇಗೆ ನಿರಾಕರಿಸೋದು ? ಒಂದೇ ಒಂದು ಸ್ಮಾಲ್ ಪೀಸ್ ತಗೊಂಡು ತಿಂದು ಕೈ ತೊಳೆಯಲು ಸಿಂಕ್ ಗೆ ಹೋದಾಗ ............................. ತಿಂದಿದ್ದೆಲ್ಲಾ ಉಲ್ಟಾ ..... :P
ನಮ್ಮತ್ತೆ ನೋಡಿ ನಗ್ತಾ ನಿಂತಿದ್ರು.. ಅಂಕಲ್ , ಆಂಟಿ ನೂ ನೋಡಿಬಿಟ್ರೆ ಅಂತ ನಂಗೆ  ಭಯ . ಬೇಗ ಬೇಗ ಸಿಂಕ್ ಎಲ್ಲಾ ಕ್ಲೀನ್ ಆಗುವಂತೆ ನೀರು ಬಿಟ್ಟೆ. ( ನನಗೆ ಮೊಸರೊಡೆ ತಿಂದ್ರೆ ಆಗೋಲ್ಲ ..ಮತ್ತೊಮ್ಮೆ ಅದನ್ನು ತಿಂದು ಉಲ್ಟಾ  ಆದ್ಮೇಲೆ ಗೊತ್ತಾದದ್ದು !! )
ಅಂತೂ ಊಟ ತುಂಬಾ ಚೆನ್ನಾಗಿತ್ತು ಅಂತ ಹೊಗಳಿ recipe ಗಳನ್ನೆಲ್ಲ ಬರೆದುಕೊಂಡು ಮನೆಗೆ ಬಂದೆವು.
ಅಂಕಲ್ , ಆಂಟಿ ಯ ಪ್ರೀತಿ ಯಾವುದೋ ಜನ್ಮಾಂತರಗಳ ಋಣವಿರಬಹುದು ಅನ್ನಿಸಿತ್ತು. ಆಮೇಲೆ ನನ್ನ ಮದುವೆಯಾಗಿ ನಾವು ಮೈಸೂರ್ ನಲ್ಲಿ ಕಲ ದಿನಗಳಿದ್ದು ನಂತರ ಡೆಲ್ಲಿ ಗೆ ಟ್ರಾನ್ಸಫರ್ ಆಗಿ ಹೋಗುವಾಗ ನಮ್ಮನ್ನು ಬೀಳ್ಕೊಡಲೆಂದು 70 ರ ಹರೆಯದ ಅವರು ರೈಲ್ವೇಸ್ಟೇಷನ್ ಗೆ ಬಂದಾಗ ಅವರ ಕಾಲಿಗೆ ನಮಸ್ಕರಿಸಿ ಅತ್ತುಬಿಟ್ಟಿದ್ದೆ. (ಅವರು ಮುಂಚಿನ ದಿನವಷ್ಟೇ ರಜಕ್ಕೆಂದು ಮೈಸೂರ್ ಗೆ ಬಂದಿದ್ದರು. )
ಇಂಥ ಅನುಭವಗಳು ಜೀವನ ದ ಹಾಗೂ ಸಮಾಜದ ಬಗೆಗಿನ ನಮ್ಮ ನಿಲುವನ್ನೆ ಬದಲಾಯಿಸಿಬಿಡುತ್ತವೆ. ಜಗತ್ತು ಎಷ್ಟು ಸುಂದರ ಎಂಬ positive feeling ನ್ನು ನಮ್ಮಲ್ಲಿ ತುಂಬುತ್ತವೆ. ಎಲ್ಲರಿಗೂ  ನಿಸ್ವಾರ್ಥ ಪ್ರೀತಿ ಹಂಚುವ ಅಂಕಲ್ ಆಂಟಿ ಯ ರೀತಿಯ ಜನ ಈ ಕಾಲದಲ್ಲೂ ಇದ್ದಾರಲ್ಲ ಎನ್ನುವ ಯೋಚನೆ  ಹಿತವೆನಿಸುತ್ತದೆ.
ಅತ್ತೆ ಮನೆಯ ಪಕ್ಕದವರಾದ ಸರೋಜ ಆಂಟಿ, ಸುಗುಣ ಆಂಟಿ, ಅತ್ತೆಯಲ್ಲಿ ಯೋಗ ಕಲಿಯಲು ಬರುತ್ತಿದ್ದ ರತ್ನ, ಅವರೆಲ್ಲಾ ಕನ್ನಡದವರಲ್ಲದಿದ್ದರೂ ನಾವು ಗಂಟೆಗಟ್ಟಳೆ ಮಾತಾಡುತ್ತಿದ್ದುದು, ಅವರು ತಮಿಳ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಕನ್ನಡದಲ್ಲಿ ಉತ್ತರಿಸುತ್ತಿದ್ದುದು, ಅವೆಲ್ಲಾ ಮರೆಯಲಾರದ ಕ್ಷಣಗಳು ಹಾಗೂ ಮರೆಯಬಾರದ ಬಂಧಗಳು. 
ಚೆನ್ನೈ ನಲ್ಲಿ ನನ್ನ ಆತ್ಮೀಯ ಬಳಗವನ್ನು ಮತ್ತೊಮ್ಮೆ ಭೇಟಿಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅವರನ್ನೆಲ್ಲ ಭೇಟಿಯಾಗಿ ಹತ್ತು ವರ್ಷಗಳು ಕಳೆದಿದ್ದರೂ ಇಂದಿಗೂ ನನ್ನ ಕ್ಷೇಮ ವಿಚಾರಿಸುವ ಅವರ ಆತ್ಮೀಯತೆಗೆ ಕರಗಿಹೋಗಿದ್ದೇನೆ. ಚೆನ್ನೈ ಗೆ ಹೋಗಿ ಬಂದು 5 ವರ್ಷಗಳ ನಂತರ ನಡೆದ ನನ್ನ ಮದುವೆಗೆ ಅವರೆಲ್ಲಾ ಕಳುಹಿಸಿದ ರಾಶಿ ಉಡುಗೊರೆಗಳು ಅವರೆಲ್ಲರ ನೆನಪುಗಳನ್ನು ಹೊತ್ತಿರುವ ನನ್ನ ಪಾಲಿನ  ಅಮೂಲ್ಯ ಆಸ್ತಿಗಳು.
ನನ್ನ ಸ್ವಂತ ಅತ್ತೆಯನ್ನು ಭೇಟಿ ಮಾಡಿಯೇ 4 ವರ್ಷಗಳಾಯಿತು. ನಮ್ಮನ್ನೆಲ್ಲಾ ತುಂಬಾ ಪ್ರೀತಿಸುವ, ತುಂಬಾ ಹಚ್ಚಿಕೊಂಡಿರುವ ನಮ್ಮತ್ತೆ ಫೋನ್  ಮಾಡಿದಾಗಲೆಲ್ಲ ಎಮೋಷನಲ್ ಆಗಿಬಿಡುತ್ತಾರೆ.
ಜೀವನಚಕ್ರ ಉರುಳುತ್ತಿದ್ದಂತೆ , ದಾರಿಗಳು ಕವಲಾಗುತ್ತಿದ್ದಂತೆ ಭೌತಿಕವಾಗಿ ನಾವು ನಮ್ಮವರಿಂದ ಎಷ್ಟು ದೂರ ಸಾಗಬೇಕಾಗುತ್ತದಲ್ಲ. ಆದರೂ ಮನದಲ್ಲಿರುವ ಪ್ರೀತಿ ನಿಜವಾದದ್ದಾದಲ್ಲಿ ಒಬ್ಬರಿಗೊಬ್ಬರು,ಒಬ್ಬರೊಲ್ಲೊಬ್ಬರು ಸದಾ ಇದ್ದೇ ಇರುತ್ತೇವೆ.
ಈ ಸಲವಾದರೂ ಕನಿಷ್ಠ 15 ದಿನಗಳ ಮಟ್ಟಿಗೆ ಚೆನ್ನೈ ಪ್ರವಾಸದ ಮಹದಾಸೆ ಇದೆ. ಆ ಆಸೆ ಈಡೇರಲಿ ಎಂದು ಪ್ರಾರ್ಥಿಸುತ್ತಿದ್ದೇನೆ.

ಬಿಟ್ಟು ಹೋದೆಯಾ ಗೆಳೆಯಾ

ಬಿಟ್ಟು ಹೋದೆಯಾ ಗೆಳೆಯಾ ನಟ್ಟ ನಡುದಾರಿಯಲಿ
ಕತ್ತಲದು ಕವಿಯುತಿದೆ ಮನದ ತುಂಬಾ
ಮತ್ತೆ ಬೆಳಗುವುದಿಲ್ಲ ಪ್ರೇಮ ಜ್ಯೋತಿಯು ಇಲ್ಲಿ
ಆರಿಸಿದ ಕಟುಹೃದಯಿ ನೀನಾದೆಯಲ್ಲ

ಗಮ್ಯವದು ದೂರವಿದೆ, ಚೈತನ್ಯ ಅಡಗುತಿದೆ
ಹೇಗೆ ಸವೆಸಲಿ ಈ ದಾರಿಯನು  ಒಂಟಿಯಾಗಿ
ನಡುದಾರಿಯಲಿ ನಿಂತೀಗ ದಿಶೆ ತಪ್ಪಿ ಹೋಗಿದೆ.
ಪಯಣಿಸುವ ಛಲ ಕೂಡ ಕ್ಷೀಣಿಸುತಿದೆಯಲ್ಲ

ಚಂದದ ಕನಸಿನಲ್ಲಿ ಪುಟ್ಟ ಮನೆಯೊಂದಿತ್ತು
ಮುಂದೊಂದು ಹೂದೋಟ ಮೀನುಕೊಳ ಜೊತೆಗೆ.
ಪ್ರೇಮದಾ ಆ ಗೂಡಿನಲಿ ಜೋಡಿ ಹಕ್ಕಿಗಳಾಗಿ
ತನುವೆರಡು ಉಸಿರೊಂದು ಎನುವ ಹಾಡಿತ್ತು

ಆ ಪ್ರೇಮನಗರಿಯಲಿ ಪ್ರೀತಿಯಾ ಸೂರಿನಡಿ
ಹತ್ತು ಮಕ್ಕಳ ಪಡೆವ ಆಸೆ ಚೆನ್ನಿತ್ತು
ಈ ಬಾಳ ಪಯಣದ ಕೊನೆಯ ಹೆಜ್ಜೆಯವರೆಗೆ
ಜೊತೆಯಾಗೆ ನಡೆಯುವ ಭಾಷೆ ನಮದಿತ್ತು.

ಹೇಗೆ ಮರೆತೇ ಹುಡುಗಾ ನಿನ್ನದೇ ಮಾತುಗಳು
ಪ್ರತಿಧ್ವನಿಸುತಿದೆ ನನಗಿನ್ನೂ ಮನದ ತುಂಬಾ
ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ

ನೂರು ಪ್ರಶ್ನೆಗಳು ಬಂದು ಮನವನ್ನು ಕಾಡುತಿವೆ
ಉತ್ತರಿಸುವ ಇಚ್ಛೆ ನಿನಗಿಲ್ಲವಲ್ಲ
ಅಚ್ಚರಿಯಾಗುತಿದೆ........
ಈತನೆನಾ ನಾ ಮೆಚ್ಚಿ ಮನಸು ಕೊಟ್ಟಿದ್ದು ?
ಎಂದಿಗೂ ನೀನೊಂದು ಪ್ರಶ್ನೆಯಾಗಿಬಿಟ್ಟೆಯಲ್ಲ

ನೀ ಕಟ್ಟಿದರಮನೆಯ ನೀನೆ ಕೊಡವಿದೆಯಲ್ಲ
ಆ ಮನಸ್ಯಾಕೆ ಕಲ್ಲಾಯ್ತೋ ನಾನರಿಯೇ ಹುಡುಗಾ
ಕನಸ ಕಂಗಳ ತುಂಬಾ ನೋವು ತುಂಬಿದೆ ಈಗ
ಚೂರಾದ ಕನಸುಗಳು ಇರಿಯುತಿವೆಯಲ್ಲ   

  ***********************

ಪ್ರೀತಿಯ ತಂಗಿಗೆ ಶುಭ ಹಾರೈಕೆ.

ನಾಳೆ ನನ್ನ  ಪ್ರೀತಿಯ ತಂಗಿಯ ಮದುವೆ . ಅವಳ ಬಾಳಿಗೊಂದು ಸಂಗಾತಿ ಬಂದು ಹೊಸ ಜೀವನ ಪ್ರಾರಂಬಿಸುವ,  ಜೀವನದಲ್ಲಿ ಒಮ್ಮೆ ಮಾತ್ರ ಬರುವಂತ ಅತಿ ಮುಖ್ಯ ದಿನ . ಆದ್ರೆ ನನಗೆ ಈ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ತುಂಬಾ ಬೇಜಾರೆನಿಸುತ್ತಿದೆ.  ನನ್ನ ಮನಸೆಲ್ಲ ಮದುವೆ ಮನೆಯಲ್ಲೇ ಇದೆ. ತಾಸಿಗೊಮ್ಮೆ ಫೋನ್ ಮಾಡಿ ಇಲ್ಲಿಂದಲೇ ಮದುವೆಯಲ್ಲಿ ಪಾಲ್ಗೊಳ್ಳುವ ಸಣ್ಣ ಪ್ರಯತ್ನಮಾಡ್ತಾ ಇದೀನಿ.

ಈಗಿನ್ನೂ ನನ್ನ ತಂಗಿಯನ್ನು (ಚಿಕ್ಕಪ್ಪನ ಮಗಳು) ಎತ್ತಿ ಮುದ್ದಾಡುತ್ತಾ ಊರೆಲ್ಲ ತಿರುಗಿಸುತ್ತಿದ್ದ ದೃಶ್ಯ ಕಣ್ ಮುಂದೆಯೇ ಇದೆ. ಒಂದೇ ಮನೆಯಲ್ಲಿ ಒಟ್ಟಾಗಿ ಬೆಳೆಯುವಾಗ ಆಡಿದ ಆಟ, ಆಟದ ನಂತರದ ಜಗಳ, ಜಗಳದ ನಂತರ ಮತ್ತೆ ಒಂದಾಗುವುದು..ಆ ದಿನಗಳು ಇನ್ನೇಂದೂ ಬರಲಾರವು ಎಂಬ ಯೋಚನೆ ನೋವು ಕೊಡುತ್ತದೆ.   ಕ್ಷಣಗಳು, ದಿನಗಳು, ವರ್ಷಗಳು ಅದೆಷ್ಟು ಬೇಗ ಜಾರಿ ಹೋಗುತ್ತಿವೆ. ವರ್ಷಗಳು ಕ್ಷಣಗಳಂತೆ ಹಾರಿ ಹೋಗುತ್ತಿವೆಯೇನೋ ಅನಿಸುತ್ತೆ ಒಮ್ಮೊಮ್ಮೆ. ಬಾಲ್ಯದ ದಿನಗಳ ನೆನಪು ಗ್ಲುಕೋಸ್ ಇದ್ದಂಗೆ. ಮನಸ್ಸಿನ ಬೇಜಾರನ್ನು ಕ್ಷಣದಲ್ಲಿ ಮಾಯಾವಾಗಿಸಿ ಮುಖದಲ್ಲಿ ನಗು ಮೂಡಿಸುತ್ತವೆ. ಆ ದಿನಗಳ ಕೆಲ ಮುದ ನೀಡುವ ವಿಷಯಗಳನ್ನ ಬರೆಯಬೇಕೆನಿಸಿದೆ.

ನಮ್ಮೂರಲ್ಲಿ ಹಾಡುಗಾರರ ಹಾವಳಿ ಸ್ವಲ್ಪ ಜಾಸ್ತಿ ಇತ್ತು. ನಮ್ಮನೆಯಲ್ಲಿ ಇನ್ನೂ ಸ್ವಲ್ಪ ಜಾಸ್ತಿ. ನಾನು ಹೈಸ್ಕೂಲ್ ಕಲಿಯುತ್ತಿದ್ದ ದಿನಗಳು. ಒಂದು ದಿನ ನಾನು ಸುಮ್ನೆ ಒಂದು ಹಾಡು ಗುನುಗುತ್ತಿದ್ದೆ (ಸ್ವಲ್ಪ ಜೋರು ಸ್ವರದಲ್ಲೇ.) 
  " ಆಕಾಶದಾಗೆ ಯಾರೋ ಮಾಯಗಾರನೋ, ಈ ಭೂಮೀ ಮಾಡಿ ಹೋಗವ್ನೆ ಏ ಏ ಏ ಏ ಏ......ಈ ಭೂಮೆ ಮ್ಯಾಗೆ ಯಾರೋ ತೋಟಗಾರನೋ, ಮಲೆನಾಡ ಮಾಡಿ ಹೋಗವ್ನೆ ಏ ಏ ಏ ಏ ಏ ... ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾ ಬಾರಾ ಆ ಆ ಆ ಆ.........      ಗೊತ್ತಾಗಿರ್ಬೇಕಲ್ಲ ಹೇಗೆ ಹಾಡಿದ್ದೆ ಅಂತ..... ಯೆಸ್,   ಹಾಗೆ   ಆ ಆ ಆ ಆ ಆಂತ ಆಲಾಪ.  ನಂಗೆ ಮುಂದೆ ಬರೋದಿಲ್ಲ ಆ  ಹಾಡು, ಅದ್ಕೆ ಅಲ್ಲಿಗೆ  ನಿಲ್ಲಿಸ್ಲೆ ಬೇಕಾಯ್ತು.  ನನ್ನ ತಂಗಿಗೆ ಹಾಡಿನ ಪಲ್ಲವಿಯೂ ಬರ್ತೀತ್ತು ಅನಸತ್ತೆ....ಸರಿ ಶುರು ಮಾಡೇ ಬಿಟ್ಲು.  ಒಂದು ಪಲ್ಲವಿ ಆಯ್ತು. ಮುಂದಿನ ಸಾಲುಗಳು ಅವ್ಳಿಗೆ ಬರೋಲ್ಲ ಈಗ ಮುಗಿಸ್ತಾಳೆ ಅಂತ ಸಮಾಧಾನ ಪಡ್ತೀರೊವಾಗ್ಲೆ ಶುರು ಮಾಡೇ ಬಿಟ್ಲು ಮುಂದಿನ ಪಲ್ಲವಿ ಕೂಡ. ಆ  ಹಾಡು ಅವ್ಳಿಗೆ ಪೂರ್ತಿ ಬರುತ್ತೆ ಅಂತ ಗೊತ್ತಾದ ಮೇಲೆ ನಾನು decide ಮಾಡಿದ್ದೆ ಆ ಹಾಡನ್ನು ಇನ್ಯಾವತ್ತೂ ಹೇಳಬಾರದು ಅಂತ. ಅವಳು ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಪಕ್ಕದ ಮನೆಯ ಸುವರ್ಣತ್ತಿಗೆ ಕೂಡ ಅದೇ ಹಾಡು ಶುರು ಮಾಡಿದಾಗ ನಾನು ಸುಸ್ತು. (ನಾನು ಹಾಡುವಾಗ ಕೂಡ  ಅವರೆಲ್ಲಾ ಸಹಿಸಿಕೊಳ್ಳುತ್ತಿದ್ದರು..ಅದು ಬೇರೆ ವಿಷಯ.)
ಒಂದು ದಿನ ಎಂದೂ ಯಾರಿಗೂ ಬಯ್ಯದ ನಮ್ಮಪ್ಪ, ಮಲಗಿದ್ದವರು ಎದ್ದು ಬಂದು ಹಾಡುತ್ತಿರುವ ನನ್ನ ಇನ್ನೊಂದು ತಂಗಿಗೆ 'ನೀನೀಗ ಬಾಯಿ ಮುಚ್ಚದಿದ್ದರೆ ನಿನ್ನ ಬಾಯಿಗೆ ಗಂ ಅಂಟಿಸಿಬಿಡುತ್ತೇನೆ' ಅಂದಾಗ  ತಂಗಿಯ ಮುಖ ಹುಳ್ಳಗಾಗಿದ್ದರೂ ನಾವೆಲ್ಲಾ ಮುಸಿ ಮುಸಿ ನಕ್ಕಿದ್ದೆವು.
ಇನ್ನೊಮ್ಮೆ  ನನ್ನ ಇನ್ನೊಬ್ಬ ತಂಗಿ ತುಂಬಾ ಜೋರು ಸ್ವರದಲ್ಲಿ ಹಾಡುತ್ತಿದ್ದಳು. ತಮಾಷೆಯ ಸ್ವಭಾವದ ನನ್ನ ಚಿಕ್ಕಪ್ಪ " ನೀನು ಅಷ್ಟು ಏರು ಸ್ವರದಲ್ಲಿ ಹಾಡುತ್ತಾ ಹೋದ್ರೆ ಆಮೇಲೆ ಇಳಿಸೋಕೆ ಒದ್ದಾಡ್ತೀಯ ..ನನ್ನತ್ರ ಇಳಿಸಿಕೊಡು ಅಂತ ಕೇಳಿದ್ರೆ ನಾನಂತೂ ಇಳಿಸೋಕೆ ಸಹಾಯ ಮಾಡಲ್ಲಾ" ಅಂದಾಗ ನಮಗೆಲ್ಲ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿತ್ತು. 
(ನನ್ನ ತಂಗಿಯರು  ಚೆನ್ನಾಗೇ ಹಾಡ್ತಾರೆ. ಆದ್ರೆ ಎಲ್ಲರೂ ಹಾಡುಗಾರರಾಗಿದ್ದಕ್ಕೆ ಸ್ವಲ್ಪ ಕಷ್ಟವಾಗಿದ್ದು..!!)
ಹೀಗೆ ಇನ್ನೆಷ್ಟೊ ಘಟನೆಗಳು. ಬರೆಯುತ್ತಾ ಹೋದರೆ ದೊಡ್ಡ ಪುಸ್ತಕವೇ ಆದೀತು. ನಮ್ಮ ಮನೆಯವರೆಲ್ಲ ಸೇರಿದಾಗ ಇದೆಲ್ಲಾ ನೆನಪಿಸಿಕೊಂಡು ತುಂಬಾ ನಗುತ್ತೇವೆ. ಆ ದಿನಗಳು ಇನ್ನೆಂದೂ ಬರಲಾರವು. ಮತ್ತೆ ಬೇಕೆಂದು ಕೇಳಿದರೆ ದುರಾಸೆಯಾದೀತು. ಆ ನೆನೆಪುಗಳೇ ಸಾಕು ಮನಸ್ಸನ್ನು ಮುದಗೊಳಿಸಲು.

ಬಾಲ್ಯದ ನೆನಪು ಮುಖದಲ್ಲಿ ಮುಗುಳ್ನಗೆ ತಂದಿದೆ. ನಾವೆಲ್ಲ ಅಕ್ಕ ತಂಗಿಯರು ಒಬ್ಬರಿಂದೊಬ್ಬರು ದೂರದಲ್ಲಿದ್ದರೂ  ಮನಸ್ಸಿನಲ್ಲಿ ತುಂಬಾ ಹತ್ತಿರದಲ್ಲಿದ್ದೆವಲ್ಲಾ ..ಅಷ್ಟು ಸಾಕು.
ಹೊಸಜೀವನದ ಹೊಸಿಲಲ್ಲಿ ನಿಂತಿರುವ  ನನ್ನ ತಂಗಿ ರಚನಾ ಗೆ  ಮದುವೆಯ ಅನುಬಂಧ ಎಂದೂ ಮಧುರ ಅನುಭೂತಿಯನ್ನು ನೀಡುತ್ತಾ ಅವಳ ವೈವಾಹಿಕ ಜೀವನ ಸದಾ ಹರುಷದಿ ಹಸಿರಾಗಿರಲಿ ಎಂದು ಮನತುಂಬಿ ಹಾರೈಸುತ್ತೇನೆ.
ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊಸ ಜೋಡಿಗೆ
ಜೀವನದ ತುಂಬೆಲ್ಲ ಹರುಷ ತುಂಬಿರಲಿ.....
ಸರಸ ಸಲ್ಲಾಪದ ಮಳೆ ಸುರಿಯಲಿ
ಪ್ರೇಮಾನುರಾಗಗಳು ಮನದಲ್ಲಿ ಮನೆ ಮಾಡಲಿ
ಮದುವೆಯ ಈ ಬಂಧ ಸದಾ ಸಂತೋಷದಿ ಹಸಿರಾಗಿರಲಿ.

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com